ಹಾಸನ: ತಿಳಿವಳಿಕೆ, ಜ್ಞಾನದ ಕೊರತೆಯಿಂದ ಅಗ್ನಿಪಥ್ ಯೋಜನೆ ವಿರುದ್ಧ ಕೆಲವರು ಪ್ರತಿಭಟನೆ ನಡೆಸುತ್ತಿದ್ದಾರೆ, ಕೆಲವರು ಅವರ ಜ್ಞಾನದ ಮಿತಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಪೂರ್ಣ ವಿಚಾರ ತಿಳಿದರೆ ಇಂತಹ ಸ್ಥಿತಿ ನಿರ್ಮಾಣ ಆಗಲ್ಲ ಎಂದು ಶಾಸಕ ಪ್ರೀತಂ ಗೌಡ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗ್ನಿಪಥ್ ಉತ್ತಮ ಯೋಜನೆಯಾಗಿದೆ. ಆದರೆ ಪ್ರತಿಭಟನೆ ಮಾಡುತ್ತಿರುವವರಿಗೆ ಜ್ಞಾನದ ಕೊರತೆ ಇದೆ. ಮುಂದೆ ಜನರೇ ಅವರಿಗೆ ಛೀಮಾರಿ ಹಾಕುವ ಕಾಲ ಬರಲಿದೆ ಎಂದರು.
ದೇಶದ ನಿರುದ್ಯೋಗ ಸಮಸ್ಯೆಗೆ ಪರಿಹಾರ ನೀಡಿ ಯುವಕರಿಗೆ ದೇಶ ಪ್ರೇಮ ಮೂಡಿಸುವ ಕೆಲಸ ಅಗ್ನಿಪಥ್ ಯೋಜನೆ ಮೂಲಕ ಆಗುತ್ತಿದೆ ಎಂದ ಅವರು, ಕಾಂಗ್ರೆಸ್ ನಾಯಕರು ತಮ್ಮ ಯೋಚನೆ ವಿಸ್ತರಿಸಬೇಕು. ಕೇವಲ ರಾಜಕಾರಣ ಮಾಡದೆ ದೇಶದ ಬಗ್ಗೆಯೂ ಯೋಚನೆ ಮಾಡಲಿ ಎಂದರು.
ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಕ್ಕಳಿಗೆ ದೇಶದ ಇತಿಹಾಸ, ಸಂಸ್ಕಾರವನ್ನು ಹೇಳಿಕೊಡಬೇಕು. ಅದನ್ನು ಬಿಟ್ಟು ಅಕ್ಬರ್ ದಿ ಗ್ರೇಟ್ ಅನ್ನೋದು, ಇನ್ನೊಬ್ಬರು ದೇಶಕ್ಕೆ ತ್ಯಾಗ, ಬಲಿದಾನ ಮಾಡಿದ್ದಾರೆ ಎಂದು ವೈಭವೀಕರಿಸುವ ಕೆಲಸ ಹಿಂದಿನಿಂದಲೂ ಆಗಿತ್ತು. ಈಗ ದೇಶದ ಬಗ್ಗೆ, ಸಮಾಜದ ಬಗ್ಗೆ ಚಿಂತನೆ ಹೆಚ್ಚಿಸುವ ಕೆಲಸ ಪಠ್ಯಪರಿಷ್ಕರಣೆಯಿಂದ ಆಗುತ್ತಿದೆ ಎಂದು ಹೇಳಿದರು.
ಪಠ್ಯಪುಸ್ತಕದಲ್ಲಿ ಅಥವಾ ಸಮಿತಿ ಬಗ್ಗೆ ಏನಾದರೂ ಸಮಸ್ಯೆ ಇದ್ದರೆ ಹೇಳಲಿ, ಚಕ್ರತೀರ್ಥ ಪರಿಷ್ಕರಣೆ ಸಮಿತಿಯಲ್ಲಿ ಕೆಲವರಿಗೆ ಅಸಮಾಧಾನ ಇರಬಹುದು. ಆದರೆ ನೂರು ಜನರಿಗೆ ಖುಷಿ ಇದೆ ಎಂದು ಪ್ರೀತಂ ಗೌಡ ಸಮರ್ಥಿಸಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.