ಸಕಲೇಶಪುರ: ‘ಕೋವಿಡ್–19 ಸೋಂಕಿನ ವಿರುದ್ಧ ಹೋರಾಡಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಿಕೊಳ್ಳುವಂತೆ ಜನರಿಗೆ ಜಾಗೃತಿ ಮೂಡಿಸುವುದು ಹಾಗೂ ನಮ್ಮಲ್ಲಿಯೂ ಸಹ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಿಕೊಳ್ಳುವ ಸಲುವಾಗಿ ಬೆಂಗಳೂರಿನಿಂದ ಸಕಲೇಶಪುರದವರೆಗೆ ಮ್ಯಾರಥಾನ್ ನಡೆಸಿದ್ದೇವೆ’ ಎಂದು ಕಾರ್ಪೋರೇಟ್ ಟ್ರೈನರ್ ಬೆಂಗಳೂರಿನ ಸಂಪತ್ತು ಹೇಳಿದರು.
ಬೆಂಗಳೂರಿನ ನಾಗಸಂದ್ರದಿಂದ ಸಕಲೇಶಪುರದವರೆಗೆ 222 ಕಿ.ಮೀ. ‘ಮಿಷನ್ ಮಲ್ನಾಡ್ ಮ್ಯಾರಥಾನ್’ ಕಳೆದ 5 ದಿನಗಳಲ್ಲಿ ಪೂರ್ಣಗೊಳಿಸಿ ಭಾನುವಾರ ಮಧ್ಯಾಹ್ನ ಪಟ್ಟಣಕ್ಕೆ ಬಂದರು.
ಇದೇ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ‘13 ವರ್ಷದವರಿಂದ 58 ವರ್ಷದ ವರೆಗೆ ಎಲ್ಲಾ ವಯಸ್ಸಿನ 23 ಜನರು ಓಟದಲ್ಲಿ ಭಾಗವಹಿಸಿದ್ದೆವು. ಕಳೆದ ಮಾರ್ಚ್ ತಿಂಗಳಿಂದ ಕೋವಿಡ್ ಸೋಂಕಿನ ಭಯದಲ್ಲಿ ಎಲ್ಲಾ ಕಡೆ ಆರೋಗ್ಯದ ಬಗ್ಗೆ ನಕಾರಾತ್ಮಕ ಭಾವನೆಗಳು ಹೆಚ್ಚಾಗಿವೆ. ನಮ್ಮ ದೇಹದ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಆದ್ದರಿಂದ ನಿತ್ಯ 50 ಕಿ.ಮೀ. ಓಡುವುದರಿಂದ ನಾವು ಆರೋಗ್ಯವಾಗಿದ್ದೇವೆ ಎಂದು ನಮ್ಮ ಮೇಲೆ ನಮಗೆ ಒಂದು ನಂಬಿಕೆ ಹಾಗೂ ಧೈರ್ಯ ಹೆಚ್ಚಾಗುತ್ತದೆ’ ಎಂದರು.
ಸುಮಾ, ಆನಂದ, ಮಂಜುನಾಥ, ರೇಖಾ, ಗುರುಪ್ರಸಾದ್, ಸಂಧ್ಯಾ, ರೂಪಾ, ಶಶಿಕಲಾ, ರವಿ, ಅರ್ಜುನ, ಸುಧೀಂದ್ರ, ಭರತ್, ಶ್ರೀಕಾಂತ್, ಸೌಮ್ಯಾ, ಆಶಾ, ವಿವೇಕ್ ಇದ್ದರು.
ಮ್ಯಾರಥಾನ್ ಪಟುಗಳನ್ನು ಇಲ್ಲಿಯ ಹೇಮಾವತಿ ಸೇತುವೆ ಬಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆ ಪ್ರಾಂಶುಪಾಲರು ಸ್ವಾಗತಿಸಿದರು.
5 ದಿನಗಳಲ್ಲಿ 222 ಕಿ.ಮೀ. ಯಶಸ್ವಿಯಾಗಿ ಓಡಿದ ಪಟುಗಳನ್ನು ರೋಟರಿ ಸಂಸ್ಥೆ ಪದಾಧಿಕಾರಿಗಳು ಅಭಿನಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.