ಅರಸೀಕೆರೆ: ನಗರದ ನಂಜನಗೂಡು ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆಯುತ್ತಿರುವ ಮೂರು ದಿನಗಳ ಆರಾಧನಾ ಮಹೋತ್ಸವದ ಕೊನೆ ದಿನವಾದ ಮಂಗಳವಾರ ಉತ್ತರಾರಾಧನೆ ಅಂಗವಾಗಿ ರಾಜಬೀದಿಗಳಲ್ಲಿ ಭಕ್ತರ ನೇತೃತ್ವದಲ್ಲಿ ಭವ್ಯ ಮೆರವಣಿಗೆ ನೆರವೇರಿತು.
ಪ್ರಾತಃ ಕಾಲದಿಂದಲೇ ನಿರ್ಮಾಲ್ಯ ಉಷಃಕಾಲ ಪೂಜೆ, 108 ಕಳಸ ಕ್ಷೀರಾಭೀಷೇಕ, ಫಲ ಪಂಚಾಮೃತಾಭಿಷೇಕ, ತುಳಸಿ ಪೂಜೆ , ಶ್ರೀರಾಯರ ಪಾದಪೂಜೆ, ಕನಕಾಭಿಷೇಕ, ಅಲಂಕಾರ ಸೇವೆ, ನೈವೇದ್ಯ, ಮಹಾಮಂಗಳಾರತಿ, ತೀರ್ಥಪ್ರಸಾ ವಿನಿಯೋಗದೊಂದಿಗೆ ಶ್ರೀಮಠದಿಂದ ಪ್ರಾರಂಭವಾದ ಮೆರವಣಿಗೆಯು ಪೇಟೇಬೀದಿ, ಬಿ.ಹೆಚ್.ರಸ್ತೆ ಮತ್ತು ವಾಚನಾಲಯ ರಸ್ತೆ ಮೂಲಕ ಶ್ರೀಮಠದಲ್ಲಿ ಅಂತ್ಯಗೊಂಡಿತು.
ವಿವಿಧ ಹೂವುಗಳಿಂದ ಅಲಂಕೃತ ಭವ್ಯ ರಥದಲ್ಲಿ ರಜತ ಮಂಟಪದಲ್ಲಿ ಪ್ರತಷ್ಠಾಪಿತ ಗುರು ರಾಘವೇಂದ್ರ ಸ್ವಾಮಿಯವರ ದರ್ಶನ ಮಾಡಿದ ನಾಗರಿಕರು ಪ್ರಾರ್ಥನೆ ಸಲ್ಲಿಸಿದರು. ಕುಂದಾಪುರ ತಾಲ್ಲೂಕಿನ ಕೋಟೇಶ್ವರದ ನೀರೆಶಾಲ್ಯ ಮಹಾಲಿಂಗೇಶ್ವರ ದೇವಸ್ಥಾನ ತಂಡದ ಚಂಡೆ ಮೇಳ ಮತ್ತು ಕೇಶವ ತಂಡದ ಮಂಗಳವಾದ್ಯ ಭಕ್ತರ ಗಮನ ಸೆಳೆಯಿತು. ಸಂಜೆ 5 ಗಂಟೆಗೆ ಸಂಗೀತಾ, ಯೋಗೇಶ್ ಮತ್ತು ತಂಡದಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು.
ಅರ್ಚಕರಾದ ನರಸಿಂಹಚಾರ್ಯ ನಾಗರಹಳ್ಳಿ, ಪ್ರದೀಪಚಾರ್ ತಂಡದಿಂದ ಪೂಜಾ ಕೈಂಕರ್ಯಗಳು ನೆರವೇರಿದವು. ಮಠದ ವ್ಯವಸ್ಥಾಪಕ ಸತ್ಯನಾರಾಯಣ ದೇಸಾಯಿ, ಗೋವಿಂದ ರಾವ್, ಮಂಜುನಾಥ ರಾವ್, ಮುರಳಿ, ರವಿ ಭಟ್ ಹೆಗ್ಗಡೆ ಮತ್ತು ಸ್ವಯಂ ಸೇವಕರು, ಮಹಿಳೆಯರು, ಪುರುಷರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.