ಹಿರೀಸಾವೆ: ಕಳೆದ ನಾಲ್ಕು ದಿನಗಳಿಂದ ಬಿದ್ದ ಮಳೆಯಿಂದ ಹಿರೀಸಾವೆ ಸಂತೆ ಮೈದಾನ ಕೆಸರುಗದ್ದೆಯಂತಾಗಿದ್ದು ವ್ಯಾಪಾರಸ್ಥರು ಮತ್ತು ಗ್ರಾಹಕರಿಗೆ ಬಹಳ ತೊಂದರೆಯಾಗಿದೆ.
ಪ್ರತಿ ಭಾನುವಾರ ಇಲ್ಲಿನ ತೂಬಿನಕೆರೆ ರಸ್ತೆಯ ಚಿಕ್ಕಕೆರೆಯ ಬಳಿ ಸಂತೆ ನಡೆಯುತ್ತದೆ. ಗ್ರಾಮ ಪಂಚಾಯಿತಿಯವರು ಸಂತೆ ಸುಂಕವನ್ನು ಸಹ ಹರಾಜು ಮಾಡುತ್ತಿದ್ದಾರೆ. ಪ್ರತಿಸಲ ಮಳೆ ಬಂದಾಗ ನೀರು ನಿಂತು ಕೊಚ್ಚೆ ರಸ್ತೆಯಾಗುತ್ತಿದೆ. ಗ್ರಾಹಕರು ಸಂತೆಯೊಳಗೆ ಹೋಗಲು ಸಹ ದಾರಿ ಇಲ್ಲದಾಗಿದೆ. ಆಗಾಗ ಈ ರಸ್ತೆಗೆ ಮಣ್ಣು ಹಾಕಲಾಗುತ್ತದೆ, ವಾಹನಗಳು ಸಂಚಾರ ಮಾಡುವುದರಿಂದ ಹೆಚ್ಚು ಗುಂಡಿ ಬೀಳುತ್ತಿದೆ. ಮಳೆಯ ನೀರು ಚರಂಡಿಗೆ ಹರಿಯುತ್ತಿಲ್ಲ. ತರಕಾರಿ, ಹಣ್ಣು, ದಿನಸಿ ಖರೀದಿಗೆ ಗ್ರಾಹಕರು ಕೊಚ್ಚೆ ನೀರಿನಲ್ಲಿ ನಿಲ್ಲಬೇಕಿದೆ. ವ್ಯಾಪಾರಸ್ಥರು ಸಹ ಸಮಸ್ಯೆ ಎದುರಿಸುತ್ತಿದ್ದಾರೆ.
‘ಹೋಬಳಿಯ ಕೇಂದ್ರದ ಸಂತೆ ಇದು, ಇತ್ತೀಚಿನ ದಿನಗಳಲ್ಲಿ ಸಂತೆಗೆ ಬರುವವರ ಸಂಖ್ಯೆ ಸಹ ಕಡಿಮೆಯಾಗಿದೆ. ಈ ಕೊಚ್ಚೆ ನೋಡಿದವರು ಮುಂದಿನ ವಾರದ ಸಂತೆಗೆ ವ್ಯಾಪಾರ ಮಾಡಲು ಮತ್ತು ಖರೀದಿಗೆ ಬರುವುದಿಲ್ಲ’ ಎನ್ನುತ್ತಾರೆ ವ್ಯಾಪಾರಿ ಜಯಣ್ಣ.
‘ಎಪಿಎಂಸಿಯವರು ಕಳೆದ ಎರಡು ವರ್ಷದ ಹಿಂದೆ ಸಂತೆ ಅಭಿವೃದ್ಧಿಪಡಿಸುವುದಾಗಿ ಹೇಳಿದ್ದರು. ಆದರೆ ಇದುವರೆಗೆ ಅನುದಾನವನ್ನು ನೀಡಿಲ್ಲ ಮತ್ತು ಅಭಿವೃದ್ಧಿ
ಸಹಪಡಿಸಿಲ್ಲ’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ್ ಆರೋಪಿಸುತ್ತಾರೆ.
‘ಕಾಂಕ್ರೀಟ್ ರಸ್ತೆ ಮಾಡಲು ಹೆಚ್ಚು ಅನುದಾನ ಇಲ್ಲ, ಮುಂದಿನ ದಿನಗಳಲ್ಲಿ ಕಾಂಕ್ರೀಟ್ ಹಾಕಲು ಯೋಜನೆ ರೂಪಿಸುವುದಾಗಿ’ ಪಿಡಿಒ ದರ್ಶನ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.