ಚನ್ನರಾಯಪಟ್ಟಣ: ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ರಾತ್ರಿ ವೇಳೆ ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಲಾರಿಯ ಚಾಲಕರನ್ನು ಹೆದರಿಸಿ, ಹಲ್ಲೆ ಮಾಡಿ ಹಣ, ಮೊಬೈಲ್ಗಳನ್ನು ದೋಚಿದ್ದ ಐವರು ಕಳ್ಳರನ್ನು ಗ್ರಾಮಾಂತರ ಠಾಣೆಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಮಹಾರಾಷ್ಟ್ರದ ಮಿರಜ್ ತಾಲ್ಲೂಕಿನ ಅಕ್ಷಯ್ ಕಾಳೆ, ಧನಂಜಯ, ಬಾದಲ್, ಸುಮಿತ್ ಹಾಗೂ ತೆಲಂಗಾಣ ರಾಜ್ಯದ ಖಮ್ಮಂ ನಗರದ ಸುಭಾಷ್ ಬಂಧಿತ ಆರೋಪಿಗಳು. ಬಂಧಿತರಿಂದ 4 ಮೊಬೈಲ್ಗಳು, 3 ಸಾವಿರ ನಗದು ಹಾಗೂ ದರೋಡೆಗೆ ಬಳಸಿದ್ದ ಚಾಕು, ಕತ್ತರಿಯನ್ನು ವಶಕ್ಕೆ ಪಡೆಯಲಾಗಿದೆ.
ಡಿ. 29 ರಂದು ಬರಗೂರು ಹ್ಯಾಂಡ್ಪೋಸ್ಟ್ ಬಳಿ ರಾತ್ರಿ ವೇಳೆ ಲಾರಿಯನ್ನು ನಿಲ್ಲಿಸಿ ಚಾಲಕ, ಕ್ಲೀನರ್ ಮಲಗಿದ್ದರು. ಅಲ್ಲಿಗೆ ಧಾವಿಸಿದ ಐವರು ₹ 2,800 ನಗದು, 3 ಮೊಬೈಲ್ ಕಳವು ಮಾಡಿದ್ದರು. ಜ. 3ರಂದು ಬಳದರೆ ಬಳಿ ಚಾಲಕನೊಬ್ಬ ಲಾರಿಯನ್ನು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಆಗ ಬಂದ ಕಳ್ಳರು ಮಾರಕಾಸ್ತ್ರದಿಂದ ಹಲ್ಲೆ ಮಾಡಿ ₹ 8,000, ಒಂದು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.
ಚನ್ನರಾಯಪಟ್ಟಣದಲ್ಲಿ ಬಿಡಾರ ಹೂಡಿದ್ದ ಕಳ್ಳರು, ಬಾಡಿಗೆ ನೀಡಿ ಆಟೊದಲ್ಲಿ ಹೆದ್ದಾರಿಗೆ ತೆರಳಿ ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ನಿವಾಸ್ ಸೆಪಟ್, ಎಎಸ್ಪಿ ನಂದಿನಿ, ಡಿವೈಎಸ್ಪಿ ಬಿ.ಬಿ.ಲಕ್ಷ್ಮೇಗೌಡ ಮಾರ್ಗದರ್ಶನದಲ್ಲಿ ಸಿಪಿಐ ಬಿ.ಜಿ. ಕುಮಾರ್, ಗ್ರಾಮಾಂತರ ಠಾಣೆಯ ಪಿಎಸ್ಐ ಎಲ್.ಎನ್. ಕಿರಣ್ ಕುಮಾರ್, ಸಿಬ್ಬಂದಿ ಎಚ್.ಸಿ.ಕುಮಾರಸ್ವಾಮಿ, ರವೀಶ್, ಪುಟ್ಟರಾಜು, ಲೋಹಿತ್, ಬೀರಲಿಂಗ, ಮೋಹನ್, ಧರಣೇಶ್, ತ್ಯಾಗರಾಜ, ಸಂತೋಷ್, ಮಧು, ಶಿವರಾಜು ಅವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಿಬ್ಬಂದಿ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ನಿವಾಸ್ ಸೆಪಟ್ ಶ್ಲಾಘಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.