ಪ್ರಜಾವಾಣಿ ವಾರ್ತೆ
ಸಕಲೇಶಪುರ: ‘ಕಾಶ್ಮೀರದ ಪಹಲ್ಗಾಮ್ ನಲ್ಲಿ ಮಂಗಳವಾರ ಹಿಂದೂ ಪ್ರವಾಸಿಗರ ಮೇಲೆ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿದ ಉಗ್ರರು ಹಾಗೂ ಅವರಿಗೆ ಸಹಾಯ ಮಾಡುತ್ತಿರುವವರನ್ನೆಲ್ಲಾ ಪತ್ತೆ ಹಚ್ಚಿ ನೇಣಿಗೆ ಹಾಕಬೇಕು’ ಎಂದು ಹಿಂದೂ ಮುಖಂಡ ರಘು ಸಕಲೇಶಪುರ ಆಗ್ರಹಿಸಿದರು.
ಪಹಲ್ಗಾಮ್ ಉಗ್ರರ ಹತ್ಯೆ ಖಂಡಿಸಿ ಬುಧವಾರ ರಾತ್ರಿ ಪಟ್ಟಣದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆ ನಡೆಸಿದ ಪಂಜಿನ ಮೆರವಣಿಗೆ ನಂತರ ಸಾರ್ವಜನಿಕ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
‘ಕಾಶ್ಮೀರ ಮಾತ್ರವಲ್ಲ ಪಶ್ಚಿಮ ಬಂಗಾಳ ಹಾಗೂ ದೇಶದ ಹಲವೆಡೆ ಹಿಂದೂಗಳ ಮೇಲೆ ಪಾಕ್ ಪೋಷಿತ ಉಗ್ರರು ನಿರಂತರ ದಾಳಿ ನಡೆಸುತ್ತಿರುವುದು ಒಂದೆಡೆಯಾದರೆ, ಭಾರತದಲ್ಲಿಯೇ ಹುಟ್ಟಿ, ಇಲ್ಲಿಯ ಅನ್ನ ತಿಂದು ನಮ್ಮ ದೇಶದ ಅಮಾಯಕ ನಾಗರಿಕರನ್ನು ಕೊಲ್ಲುತ್ತಿರುವ ಉಗ್ರರನ್ನು ಪತ್ತೆ ಮಾಡಿ, ಅವರ ಮನೆ ಕುಟುಂಬಗಳನ್ನು ಧ್ವಂಸ ಮಾಡಬೇಕು. ಅವರನ್ನು ದೇಶದಿಂದ ಗಡಿಪಾರು ಮಾಡಬೇಕು’ ಎಂದು ಒತ್ತಾಯಿಸಿದರು.
ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ರಾಜ ಬೀದಿಯಲ್ಲಿ ಪಂಜಿನ ಮೆರವಣಿಗೆ ನಡೆಸಿ, ಹಳೆ ಬಸ್ನಿಲ್ದಾಣದ ಬಳಿ ಸಭೆ ನಡೆಸಿದರು. ಪುರಸಭೆ ಸದಸ್ಯರಾದ ರೇಖಾ ರುದ್ರಕುಮಾರ್, ವನಜಾಕ್ಷಿ ಹಾಗೂ ಹಿಂದೂ ಹಿತರಕ್ಷಣಾ ವೇದಿಕೆಯ ಮುಖಂಡರು ಪತ್ರಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.