ADVERTISEMENT

ಸಮಾಜದಲ್ಲಿನ ತಪ್ಪು ಪ್ರಶ್ನಿಸುವಂತಾಗಿ

ವಿದ್ಯಾರ್ಥಿಗಳಿಗೆ ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 13:04 IST
Last Updated 4 ಆಗಸ್ಟ್ 2019, 13:04 IST
‌ಹಾಸನದಲ್ಲಿ ಏರ್ಪಡಿಸಿದ್ದ ಮತ್ತೆ ಕಲ್ಯಾಣ ಕಾರ್ಯಕ್ರಮದ ಸಂವಾದದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು
‌ಹಾಸನದಲ್ಲಿ ಏರ್ಪಡಿಸಿದ್ದ ಮತ್ತೆ ಕಲ್ಯಾಣ ಕಾರ್ಯಕ್ರಮದ ಸಂವಾದದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು   

ಹಾಸನ : ‘ಜಾತಿ ದೇಹಕ್ಕೆ ಅಂಟಿರುವ ಚರ್ಮದಂತೆ. ಅದನ್ನು ತೊಡೆದು ಹಾಕುವುದು ಕನಸಿನ ಮಾತು. ಜಾತೀಯತೆ ತೊಡೆದು ಹಾಕಬೇಕಾದರೆ ಸರ್ವಜ್ಞನ ವಚನದಂತೆ ‘ಇವನಾರವ ಇವನಾರವ ಎಂಬುದರ ಬದಲಿಗೆ ಇವನಮ್ಮವ ಇವ ನಮ್ಮವ’ ಎಂದು ಸರ್ವರನ್ನು ಹೃದಯದಿಂದ ಒಪ್ಪಿಕೊಳ್ಳಬೇಕು’ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ಹಾಸನಾಂಬ ಕಲಾಕ್ಷೇತ್ರದಲ್ಲಿ ಸಹಮತ ವೇದಿಕೆ ವತಿಯಿಂದ ಆಯೋಜಿಸಿದ್ದ ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಬುದ್ಧ, ಬಸವಣ್ಣ ಹೀಗೆ ಅನೇಕ ಚಿಂತಕರು ಹೋರಾಡಿದರು. ಅವರ ಚಿಂತನೆಯಲ್ಲೇ ಮತ್ತೆ ಕಲ್ಯಾಣ ಕಾರ್ಯಕ್ರಮ ನಡೆಯುತ್ತಿದೆ. ಉತ್ತಮ ನಡೆ, ನುಡಿಯ ಮೂಲಕ ಸಮಾಜದಲ್ಲಿ ಕೇಡು ಬಯಸದೆ ನಡೆಯುವಂತೆ’ ಕರೆ ನೀಡಿದರು.

ADVERTISEMENT

‘ಪ್ರತಿಯೊಬ್ಬರು ಕಾಯಕ ಮತ್ತು ದಾಸೋಹ ಪರಿಕಲ್ಪನೆ ಇಟ್ಟುಕೊಂಡು ನಡೆದರೆ ಸಮಾಜದಲ್ಲಿ ಹಸಿವು ಎಂಬುದೇ ಇರುವುದಿಲ್ಲ. ಸಮಾಜದ ತಪ್ಪುಗಳನ್ನು ಪ್ರಶ್ನಿಸುವುದನ್ನು ಯುವ ಸಮೂಹ ಬೆಳೆಸಿಕೊಳ್ಳಬೇಕು. ವಿದ್ಯೆಯ ಜೊತೆಗೆ ವಿನಯ ಇರಬೇಕು’ ಎಂದು ನುಡಿದರು.

ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, ‘ಶಿಕ್ಷಣ ಪಡೆದಂತೆ ಜಾತಿ ಆಚರಣೆ ಹೆಚ್ಚುತ್ತಿದೆ. ನೀರು, ಗಾಳಿ, ಭೂಮಿಗೆ ಜಾತಿಯಿಲ್ಲ. ಅವುಗಳಂತೆ ನಾವು ಕೂಡ ಜಾತಿ ಎಂಬ ಭೂತ ಪ್ರಜ್ಞೆ ಯಿಂದ ಹೊರ ಬರಬೇಕು. ಜಾತೀಯತೆ ಮತ್ತು ಭ್ರಷ್ಟಾಚಾರದ ವಿಚಾರಗಳಲ್ಲಿ ಮೊದಲು ಬದಲಾಗಬೇಕು. ಸಮಾಜದ ಬದಲಾವಣೆ ಬಯಸುವ ಮೊದಲು ನಾವು ಬದಲಾಗಬೇಕು’ ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಚಿಂತಕ ಗಂಗಾಧರ್ ಬಹುಜನ್ ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ಡಿ.ಸಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಾಮರಸ್ಯದ ನಡಿಗೆ ಆರಂಭಗೊಂಡಿತು.

ಚಿಂತಕ ಲೋಕೇಶ್‌ ಅಗಸನಕಟ್ಟೆ ಮತ್ತು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಬೀಹಾ ಭೂಮಿಗೌಡ ಉಪನ್ಯಾಸ ನೀಡಿದರು.

ಮೋಳಿಗೆ ಮಾರಯ್ಯ ನಾಟಕ ಪ್ರದರ್ಶಸಲಾಯಿತು. ಸಾಮೂಹಿಕ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.