ADVERTISEMENT

ಸೆಲ್ಫಿ ಗೀಳು: ನವದಂಪತಿ ಸಾವು

​ಪ್ರಜಾವಾಣಿ ವಾರ್ತೆ
Published 8 ಮೇ 2020, 20:22 IST
Last Updated 8 ಮೇ 2020, 20:22 IST
ಕೃತಿಕಾ ಮತ್ತು ಆರ್ಥೀಶ್‌
ಕೃತಿಕಾ ಮತ್ತು ಆರ್ಥೀಶ್‌   

ಸಕಲೇಶಪುರ (ಹಾಸನ): ಸಮೀಪದ ಹೆನ್ನಲಿ ಗ್ರಾಮದ ಬಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ನವದಂಪತಿ, ಕಾಲುಜಾರಿ ಹೇಮಾವತಿ ನದಿಗೆ ಬಿದ್ದು ಗುರುವಾರ ಸಂಜೆ ಮೃತಪಟ್ಟಿದ್ದಾರೆ.

ಹೆನ್ನಲಿಯ ರೈತ ಕೃಷ್ಣಮೂರ್ತಿ ಅವರ ಪುತ್ರಿ ಕೃತಿಕಾ (23), ಬೇಲೂರು ತಾಲ್ಲೂಕು ಮುರೇಹಳ್ಳಿ ಗ್ರಾಮದ ರೈತ ಎಂ.ಆರ್‌. ರುದ್ರಪ್ಪಗೌಡ ಅವರ ಪುತ್ರ ಆರ್ಥೀಶ್‌ (27) ಮೃತಪಟ್ಟವರು.

ರಾತ್ರಿ ಕೃತಿಕಾ ಶವ, ಶುಕ್ರವಾರ ಬೆಳಿಗ್ಗೆ ಆರ್ಥೀಶ್‌ ಶವ ಪತ್ತೆಯಾಗಿದೆ. ಇವರ ವಿವಾಹ ಮಾರ್ಚ್‌ 20ರಂದು ನಡೆದಿತ್ತು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಲಾಕ್‌ಡೌನ್‌ನಿಂದಾಗಿ ಊರಿನಲ್ಲಿಯೇ ಉಳಿದಿದ್ದರು.

ADVERTISEMENT

ಹೇಮಾವತಿ ನದಿಗೆ ನಿರ್ಮಿಸಿರುವ ಚೆಕ್‌ಡ್ಯಾಂ ಬಳಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ,ಮಳೆಯಿಂದ ಸಡಿಲವಾಗಿದ್ದ ಮಣ್ಣು ಕುಸಿದು ಅವಘಡ ಸಂಭವಿಸಿದೆ. 20 ಅಡಿ ಆಳವಿದ್ದ ನೀರಿನ ಗುಂಡಿಗೆ ಇಬ್ಬರು ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.

‘ಮನೆಯವರ ಹೇಳಿಕೆಯಂತೆ ಮದುವೆ ಆದ ದಿನದಿಂದ ಇಬ್ಬರ ನಡುವೆ ಸಣ್ಣ ಪುಟ್ಟ ಜಗಳವೂ ಆಗಿರಲಿಲ್ಲ. ಹಾಗಾಗಿ, ಇದು ಆತ್ಮಹತ್ಯೆ ಪ್ರಕರಣವಲ್ಲ’ ಎಂದು ಡಿವೈಎಸ್‌ಪಿ ಗೋಪಿ ‘ಪ್ರಜಾವಾಣಿ‌’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.