ಅರಸೀಕೆರೆ: ಶರನ್ನವರಾತ್ರಿ ಹಿನ್ನೆಲೆಯಲ್ಲಿ ನಗರದ ಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ ಸತತ ಒಂಬತ್ತು ದಿನ ನಡೆದ ಶತಚಂಡಿಕಾಯಾಗ ಆಯಧ ಪೂಜೆ ದಿನದಂದು ಪೂರ್ಣಾಹುತಿಯೊಂದಿಗೆ ಸಂಪನ್ನವಾಯಿತು.
ಶತಚಂಡಿಕಾಯಾಗದ ಪೂರ್ಣಾಹುತಿಗೆ ಚಾಲನೆ ನೀಡಿದ ಆಶ್ರಮದ ಅವಧೂತರಾದ ಸತೀಶ್ ಶರ್ಮಾ ಗುರೂಜಿ ಮಾತನಾಡಿ, ‘ಪ್ರತಿವರ್ಷ ಶರನ್ನವರಾತ್ರಿ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸರಳವಾಗಿ ಕಡಿಮೆ ಭಕ್ತರ ಸಮ್ಮುಖದಲ್ಲಿ ಆಚರಿಸಲಾಯಿತು. ಈ ಬಾರಿ ಕೊರೊನಾ ಸೋಂಕು ನಿಗ್ರಹಕ್ಕೆ ಶತಚಂಡಿಕಾ ಯಾಗ ಆರಂಭಿಸಲಾಗಿತ್ತು, ಶೀಘ್ರವೇ ಕೊರೊನಾದಿದ ರಾಜ್ಯದ ಜನತೆಗೆ ಮುಕ್ತಿ ದೊರೆಯುವಂತಾಗಲಿ’ ಎಂದರು.
ಮಾರುತಿ ಸಚ್ಚಿದಾನಂದಾಶ್ರಮದ ಆಡಳಿತಾಧಿಕಾರಿ ಮುರುಳಿ ಮಂದರ್ತಿ ಮಾತನಾಡಿ, ‘ಶರನ್ನವರಾತ್ರಿ ಉತ್ಸವ ಹಿನ್ನೆಲೆಯಲ್ಲಿ ನಡೆದ ಶತಚಂಡಿಕಾ ಯಾಗದಲ್ಲಿ ಈ ಬಾರಿ ಶೃಂಗೇರಿ ಮಠದ 21 ಋತ್ವಿಕರ ನೇತೃತ್ವದಲ್ಲಿ ಮಹಾಯಾಗ ನೆರವೇರಿತು. ಸತತ ಒಂಬತ್ತು ದಿನ ನಡೆದ ಈ ಯಾಗದ ಅಂತಿಮ ದಿನವಾದ ಆಯುಧ ಪೂಜೆಯ ದಿನದಂದು ಶತಚಂಡಿಕಾ ಯಾಗ ಸಂಪನ್ನವಾಗಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮುಖಗವಸು ಧರಿಸುವುದು ಮತ್ತು ಅಂತರ ಕಾಪಾಡುವುದು ಸೇರಿದಂತೆ ಸರ್ಕಾರದ ಮಾರ್ಗಸೂಚಿಯನ್ವಯ ಕಡಿಮೆ ಭಕ್ತರ ಸಮ್ಮುಖದಲ್ಲಿ ಸರಳವಾಗಿ ಆಚರಿಸಲಾಯಿತು’ ಎಂದರು.
ಆಶ್ರಮದಲ್ಲಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಅಲಂಕಾರ ನೆರವೇರಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.