ADVERTISEMENT

ಮೂಕ ಜೋಡಿ ದಾಂಪತ್ಯ ಗೀತೆ

ವರ ಖಾಸಗಿ ಕಂಪನಿ ನೌಕರ, ವಧು ಟೈಲರ್

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 9:57 IST
Last Updated 2 ಜೂನ್ 2019, 9:57 IST
ಆಲೂರಿನಲ್ಲಿ ನವಜೀವನಕ್ಕೆ ಕಾಲಿಟ್ಟ ಮಹೇಶ್‌ ಹಾಗೂ ಪವಿತ್ರಾ
ಆಲೂರಿನಲ್ಲಿ ನವಜೀವನಕ್ಕೆ ಕಾಲಿಟ್ಟ ಮಹೇಶ್‌ ಹಾಗೂ ಪವಿತ್ರಾ   

ಹಾಸನ: ಹುಟ್ಟಿನಿಂದಲೂ ಅವರದ್ದು ಮೌನ ಬದುಕು. ಅವರ ಜೀವನದಲ್ಲಿ ಈಗ ಮದುವೆ ಸಂಭ್ರಮ.

ಆಲೂರು ಪಟ್ಟಣದ ಕಲ್ಯಾಣ ಮಂಟಪದಲ್ಲಿ ಮೂಕ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು.

ಮಂಡ್ಯ ಜಿಲ್ಲೆ ವೈಯಾರಹಳ್ಳಿ ಗ್ರಾಮದ ಮಾದಯ್ಯ ಅವರ ಮಗ ವೈ.ಎಂ.ಮಹೇಶ್‌ ಮತ್ತು ಪಾಳ್ಯ ಹೋಬಳಿ ಗುಂಡನಬೆಳ್ಳೂರು ಗ್ರಾಮದ ಮಂಜಣ್ಣ ಅವರ ಮಗಳು ಪವಿತ್ರಾ ಹಿರಿಯರ ಸಮ್ಮುಖದಲ್ಲಿ ಸತಿ– ಪತಿ ಆದರು.

ADVERTISEMENT

ಮಹೇಶ್‌ ರಾಜ್ಯಮಟ್ಟದ ವಾಲಿಬಾಲ್‌ ಪಟುವಾಗಿದ್ದು, ಇತ್ತೀಚೆಗೆ ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಭಾಗವಹಿಸಿದ್ದರು. ಇವರ ಪೋಷಕರಾದ ಮಾದಯ್ಯ ದಂಪತಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ಮಹೇಶ್‌ ಐಟಿಐ ಓದಿ ಮೈಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ವಧು ಪವಿತ್ರಾ ಅವರ ತಂದೆ ಮಂಜಣ್ಣ ಅವರಿಗೆ ಮೂವರು ಹೆಣ್ಣು ಮಕ್ಕಳು. ದುರದೃಷ್ಟವಶಾತ್‌ ಮೂವರಲ್ಲಿ ಮೊದಲ ಎರಡು ಮಕ್ಕಳೂ ಮೂಕರು. ಹಿರಿಯ ಮಗಳೇ ಪವಿತ್ರಾ. ಎರಡನೇ ಮಗಳು ಸುಚಿತ್ರಾಳೂ ಮೂಕಳಾಗಿದ್ದು, ಮೈಸೂರಿನ ಖಾಸಗಿ ಮೂಗರ ಶಾಲೆಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ.

ಸಕಲೇಶಪುರದ ಕೌಡಳ್ಳಿಯ ಮೂಕರ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿವರೆಗೆ ವ್ಯಾಸಂಗ ಮಾಡಿರುವ ಪವಿತ್ರಾ, ಟೈಲರಿಂಗ್‌ ವೃತ್ತಿ ಮಾಡಿಕೊಂಡಿದ್ದಾರೆ. ಮೂರನೇ ಮಗಳು ಸುಪ್ರಿತಾ ಐದನೇ ತರಗತಿ ಓದುತ್ತಿದ್ದಾಳೆ.

ಸಕಲೇಶಪುರದಲ್ಲಿ ನಡೆದ ಮದುವೆ ಒಂದರಲ್ಲಿ ಎರಡೂ ಕುಟುಂಬದವರು ಭೇಟಿಯಾಗಿ, ಮಾತುಕತೆ ನಡೆಸಿ ವಿವಾಹ ನೆರವೇರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.