ನುಗ್ಗೇಹಳ್ಳಿ: ಹೋಬಳಿಯ ಸಂತೇ ಶಿವರ ಅಗ್ರಹಾರ ಬೆಳಗುಲಿ ಏತ ನೀರಾವರಿ ಯೋಜನೆ ಸಾಕಾರಗೊಳ್ಳಲು ಸಾಹಿತಿ ಎಸ್.ಎಲ್. ಭೈರಪ್ಪ ಕಾರಣ. ಅವರ ಪರಿಶ್ರಮದಿಂದ ಅನುದಾನ ದೊರೆತಿದೆ. ಆದ್ದರಿಂದ ಈ ಯೋಜನೆಗೆ ಅವರ ಹೆಸರಿಡಲಾಗಿದೆ’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಕಾರೇಹಳ್ಳಿ ಸಮೀಪದ ಜಾಬಘಟ್ಟ ಗ್ರಾಮದ ಬಳಿ ನಾಗಮಂಗಲ ವಿಭಾಗದ ಹೇಮಾವತಿ ನಾಲೆಯ ಜಾಕ್ವೆಲ್ನಲ್ಲಿ ನೀರೆತ್ತುವ ಮೋಟರ್ಗೆ ಚಾಲನೆ ನೀಡಿ ಮಾತನಾಡಿದರು.
‘ಎಸ್.ಎಲ್.ಭೈರಪ್ಪ ಅವರು ತಮ್ಮ ಹುಟ್ಟೂರಾದ ಸಂತೇ ಶಿವರ ಗ್ರಾಮದ ರೈತರಿಗೆ ಅನುಕೂಲ ಮಾಡಿಕೊಡಲು ಗ್ರಾಮದ ಕೆರೆ ಶಾಶ್ವತವಾಗಿ ತುಂಬಿಸುವ ಉದ್ದೇಶದಿಂದ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ₹20 ಕೋಟಿಗೂ ಹೆಚ್ಚು ಅನುದಾನವನ್ನು ಬಿಡುಗಡೆ ಮಾಡಿಸಿದ್ದರು. ಕಳೆದ ವರ್ಷ ಯೋಜನೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸಲಾಗಿದೆ. ಯೋಜನೆ ಸಹಕಾರ ಗೊಳ್ಳಲು ಶ್ರಮಿಸಿದ ಅವರಿಗೆ ಗೌರವ ಸೂಚಿಸುವ ಸಲುವಾಗಿ ಡಾ. ಎಸ್.ಎಲ್. ಭೈರಪ್ಪ ಯೋಜನೆ ಎಂದು ಹೆಸರಿಡಲಾಗಿದೆ’ ಎಂದರು.
‘ಈ ಯೋಜನೆಯಿಂದ ಸಂತೇ ಶಿವರ ಅಗ್ರಹಾರ ಬೆಳಗುಲಿ ಹಾಗೂ ದುಗ್ಗೇನಹಳ್ಳಿ, ಯಾಚನಘಟ್ಟ ಗ್ರಾಮಗಳ ಕೆರೆಗಳು ತುಂಬುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ’ ಎಂದರು.
ತೋಟಿ ಏತ ನೀರಾವರಿ ಯೋಜನೆಯ ಕಾಮಗಾರಿ ಶೇಕಡಾ 90ರಷ್ಟು ಪೂರ್ಣಗೊಂಡಿದ್ದು, ಗುತ್ತಿಗೆದಾರರ ಸಮಸ್ಯೆಯಿಂದ ವಿಳಂಬವಾಗಿದೆ. ಈ ಬಗ್ಗೆ ನೀರಾವರಿ ಸಚಿವರ ಗಮನಕ್ಕೂ ತರಲಾಗಿದೆ. ಬಾಕಿ ಉಳಿದಿರುವ 900 ಮೀಟರ್ ಪೈಪ್ಲೈನ್ ಕಾಮಗಾರಿ, ಜಾಕ್ವೆಲ್ನಲ್ಲಿ ವಿದ್ಯುತ್ ಸಂಪರ್ಕ ಶೀಘ್ರ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.
ಕಾರೇಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ಎ. ಸತೀಶ್, ಟಿಎಪಿಎಂಎಸ್ ತಾಲ್ಲೂಕು ನಿರ್ದೇಶಕ ಎಸ್.ಚಿರಂಜೀವಿ, ರೇಷ್ಮೆ ಇಲಾಖೆ ನಿವೃತ್ತ ಅಧಿಕಾರಿ ಕೃಷ್ಣಪ್ರಸಾದ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಸಿ.ಡಿ ರೇವಣ್ಣ, ಹುಲಿಕೆರೆ ಸಂಪತ್ ಕುಮಾರ್, ನಟೇಶ್, ಗ್ರಾ.ಪಂ ಮಾಜಿ ಅಧ್ಯಕ್ಷರಾದ ಕೆಂಪೇಗೌಡ, ಸಿ.ಜೆ ಕುಮಾರ್, ಜೆಡಿಎಸ್ ಮುಖಂಡ ಭೂನಹಳ್ಳಿ ಯೋಗೇಶ್, ಮುಖಂಡರಾದ ಎಸ್.ಬಿ. ವೀರೇಶ್, ಕೃಷ್ಣೇಗೌಡ, ಬೆಳಗೀಹಳ್ಳಿ ಪುಟ್ಟಸ್ವಾಮಿ, ಬ್ಯಾಂಕ್ ಚಂದ್ರಣ್ಣ, ಉದ್ಯಮಿ ಚಿಪ್ಪಿನ ಚಂದ್ರು, ದ್ಯಾವಲಾಪುರ ಪ್ರಕಾಶ್, ದೊಡಗನ್ನಿ ಸತೀಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.