ಚನ್ನರಾಯಪಟ್ಟಣ: ‘ತಾಲ್ಲೂಕಿನ ಆರು ಹೋಬಳಿಗಳಲ್ಲಿ 5,395 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯಲಾಗಿದೆ. ಅದರಲ್ಲಿ ಅಂದಾಜು 1,200 ಹೆಕ್ಟೇರ್ ಪ್ರದೇಶದಲ್ಲಿದ್ದ ಮುಸುಕಿನ ಜೋಳಕ್ಕೆ ಬಿಳಿಸುಳಿ ರೋಗ ತಗುಲಿ ಬೆಳೆ ಹಾಳಾಗಿದೆ’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ತಾಲ್ಲೂಕಿನ ಕೆ.ವಡ್ಡರಹಳ್ಳಿಯಲ್ಲಿ ರೋಗ ತಗುಲಿ ಹಾಳಾಗಿರುವ ಮುಸುಕಿನ ಜೋಳದ ಬೆಳೆಯನ್ನು ಶನಿವಾರ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿತ್ತನೆ ಮಾಡಿದ 15 ದಿನದಲ್ಲಿ ಕಾಣಿಸಿಕೊಳ್ಳುತ್ತದೆ. ಎಲೆಯಲ್ಲಿ ಶೀಲಿಂಧ್ರ ಬಾಧಿಸಿ ಅದು ಹಳದಿಬಣ್ಣಕ್ಕೆ ತಿರುಗಿ ಬೆಳೆ ಹಾಳಾಗುತ್ತದೆ. ರೈತರಿಗೆ ಒಂದು ಎಕರೆ ಬೆಳೆಗೆ ಅಂದಾಜು ₹ 20 ಸಾವಿರ ಖರ್ಚಾಗುತ್ತದೆ. ಸೋಮವಾರ ಹಾಸನದಲ್ಲಿ ಕೆಡಿಪಿ ಸಭೆ ಇದೆ. ರೈತರಿಗೆ ಪರಿಹಾರ ನೀಡಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಮನವಿ ಮಾಡಲಾಗುವುದು ಎಂದರು.
ವಿಧಾನಮಂಡಲದ ಅಧಿವೇಶನದಲ್ಲಿಯೂ ಈ ಬಗ್ಗೆ ಚರ್ಚಿಸಿ ಪರಿಹಾರಕ್ಕೆ ಆಗ್ರಹಿಸಲಾಗುವುದು. ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ತಜ್ಞರಿಂದ ಕಾರ್ಯಾಗಾರ ಏರ್ಪಡಿಸಿ ಬಿಳಿಸುಳಿರೋಗ ತಡೆಗಟ್ಟಲು ಮಾಹಿತಿ ನೀಡಲಾಗುವುದು. ಬೆಳೆ ಸಂರಕ್ಷಣೆ, ಉತ್ತಮ ಬೆಳೆದ ರೈತರ ಬಗ್ಗೆ ಮಾಹಿತಿ ನೀಡಲಾಗುವುದು. ತೆಂಗಿನ ಮರಗಳಿಗೆ ಗರಿ ರೋಗ ಮತ್ತು ಸುಳಿರೋಗದಿಂದ ಕಡಿಮೆಯಾಗುತ್ತಿದೆ ಎಂದು ತಿಳಿಸಿದರು. ಕೃಷಿ ಸಹಾಯಕ ನಿರ್ದೇಶಕ ಮೋಹನ್ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.