ADVERTISEMENT

‘ಸ್ಪಂದನ’ ತಂತ್ರಾಂಶ: 3065 ಅರ್ಜಿ ಸ್ವೀಕಾರ, 2755 ವಿಲೇವಾರಿ 

ಕುವೈತ್‌ನಲ್ಲಿರುವ ಮಹಿಳೆಯಿಂದಲೂ ಬಳಕೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2019, 12:36 IST
Last Updated 1 ಜನವರಿ 2019, 12:36 IST

ಹಾಸನ: ಜಿಲ್ಲಾ ಸಾರ್ವಜನಿಕ ಕುಂದು ಕೊರತೆಗಳ ನಿವಾರಣೆಗಾಗಿ ಆರಂಭಿಸಿದ ‘ಸ್ಪಂದನ’ ತಂತ್ರಾಂಶಕ್ಕೆ ಉತ್ತಮ ಸ್ಪಂದನೆ ದೊರಕ್ಕಿದ್ದು, ವರ್ಷದಕ್ಲಿ 3065 ಅರ್ಜಿಗಳು ಸಲ್ಲಿಕೆಯಾಗಿದ್ದು, 2755 ಅರ್ಜಿಗಳು ವಿಲೇವಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.

ವರ್ಷಾಂತ್ಯಕ್ಕೆ 310 ಅರ್ಜಿಗಳು ಬಾಕಿ ಇದ್ದು, ಇವುಗಳನ್ನು ನಿಗದಿತ ಕಾಲಾವಧಿಯೊಳಗೆ ವಿಲೇವಾರಿಗೆ ಕ್ರಮ ವಹಿಸಲಾಗುತ್ತಿದೆ. ಈ ತಂತ್ರಾಂಶವನ್ನು ರೂಪಿಸಿ ಒಂದು ವರ್ಷ ಅವಧಿ ಯಶಸ್ವಿಯಾಗಿ ಪೂರೈಸಲಾಗಿದೆ. ತಂತ್ರಾಂಶವನ್ನು ಬಳಸಿ ಜಿಲ್ಲೆಗೆ ಸಂಬಂಧಿಸಿದಂತೆ ದೇಶ ವಿದೇಶದ ಯಾವುದೇ ಮೂಲೆಯಿಂದಾದರೂ ಅರ್ಜಿ ಸಲ್ಲಿಸಬಹುದು ಹಾಗೂ ತಾವು ನೀಡಿದ ಅರ್ಜಿ ವಿಲೇವಾರಿಯಾಗಿದೆಯೇ? ಅಥವಾ ತಾವು ನೀಡಿದ ಸಮಸ್ಯೆಗೆ ಪರಿಹಾರ ಯಾವ ರೂಪದಲ್ಲಿ ದೊರತಿದೆ ಎಂದು ತಿಳಿಯಬಹುದಾಗಿದೆ ಎಂದು ವಿವರಿಸಿದರು.

ಕುವೈತ್ ನಿಂದಲೂ ಒಬ್ಬ ಮಹಿಳೆ ಹಾಸನದ ಭೂ ಸಮಸ್ಯೆ ಬಗ್ಗೆ ಕರೆ ಮಾಡಿ ಸ್ಪಂದನ ತಂತ್ರಾಶದ ಉಪಯೋಗ ಪಡೆದಿದ್ದಾರೆ. ‘ಸ್ಪಂದನ’ದಲ್ಲಿ ದೂರು ದಾಖಲಾದ, ಪರಿಶೀಲನೆ ಮತ್ತು ಇತ್ಯರ್ಥವಾಗುವ ಹಂತದ ಮಾಹಿತಿಯು ದೂರುದಾರರ ಮೊಬೈಲ್ ನಂಬರ್‌ಗೆ ಸಂದೇಶ ರವಾನೆಯಾಗುತ್ತದೆ. ಈ ತಂತ್ರಾಂಶಕ್ಕೆ ಸಹಕರಿಸಿದ ಸಾರ್ವಜನಿಕ ಹಾಗೂ ಎಲ್ಲಾ ಇಲಾಖಾ ಅಧಿಕಾರಿಗಳ ಸ್ಪಂದನೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅರ್ಜಿಗಳಲ್ಲಿ ಹೆಚ್ಚಿನವು ಕಂದಾಯ ಇಲಾಖೆ, ಪೋಲೀಸ್ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಇಲಾಖೆಗಳಿಗೆ ಸೇರಿದ್ದಾಗಿವೆ ಎಂದು ಹೇಳಿದರು.

ADVERTISEMENT

ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿ, ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ 2018ರ ಜುಲೈ ಮತ್ತು ಆಗಸ್ಟ್ ನಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಿದ್ದು, ಸ್ವೀಕೃತವಾದ ಅರ್ಜಿಗಳನ್ನು ಸ್ಪಂದನ ತಂತ್ರಾಂಶದಲ್ಲಿ ಅಳವಡಿಸಿ ಸ್ಥಳದಲ್ಲಿ ಅನೇಕ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿತ್ತು. ಇಲಾಖಾ ಅಧಿಕಾರಿಗಳ ಸಮಕ್ಷಮದಲ್ಲಿ ಸಾರ್ವಜನಿಕ ಕುಂದುಕೊರತೆ ಕಾರ್ಯಕ್ರಮ ಆಯೋಜಿಸಿದ್ದರಿಂದ ಹಾಗೂ ಸ್ಪಂದನ ತಂತ್ರಾಂಶದಲ್ಲಿ ಅಳವಡಿಸಿ ವಿಲೇವಾರಿ ಮಾಡಿದ್ದರಿಂದ ಸಾರ್ವಜನಿಕರಿಗೆ ಸಹಕಾರಿಯಾಗಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.