ಹೊಳೆನರಸೀಪುರ: ‘ಭಾರತೀಯ ಸೇನೆಯನ್ನು ಯಾರೂ ಮಣಿಸಲು ಸಾಧ್ಯ ಇಲ್ಲ. ನಮ್ಮ ಸೇನೆ ಅತ್ಯಂತ ಬಲಾಢ್ಯವಾಗಿದೆ. ನಮ್ಮ ಸೈನಿಕರ ಧೈರ್ಯ, ಸಾಹಸ ಹಾಗೂ ನಮ್ಮಲ್ಲಿರುವ ಆಧುನಿಕ ಶಸ್ತ್ರಾಸ್ತ್ರಗಳ ಮುಂದೆ ಬೇರಾವುದೇ ದೇಶದವರು ನಿಲ್ಲಲು ಸಾಧ್ಯ ಇಲ್ಲ’ ಎಂದು ಯೋಧ ಎಚ್.ಎಲ್.ರೇವಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ವಸಂಸ್ಥೆ ಶಾಂತಿಪಾಲನೆ ಪಡೆಯಲ್ಲೂ ಕರ್ತವ್ಯ ನಿರ್ವಹಿಸಿ ಪರಾಕ್ರಮ ಪದಕ ಪಡೆದಿರುವ, ಭಾರತೀಯ ಸೇನೆಯಿಂದ ನಿವೃತ್ತಿ ಹೊಂದಿದ ರೇವಣ್ಣ ಮಂಗಳವಾರ ಪಟ್ಟಣಕ್ಕೆ ಆಗಮಿಸಿದಾಗ ಅವರನ್ನು ರೈಲ್ವೆ ನಿಲ್ದಾಣದಿಂದ ಮೆರವಣಿಗೆಯಲ್ಲಿ ಕರೆತಂದು ಇಲ್ಲಿನ ಗಣಪತಿ ಪೆಂಡಾಲ್ ಸಾಂಸ್ಕೃತಿಕ ವೇದಿಕೆಯಲ್ಲಿ ಸಂಘ ಸಂಸ್ಥೆಗಳು ಹಾಗೂ ನಾಗರಿಕರು ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಅವರು, ‘ನಮ್ಮ ದೇಶದಲ್ಲಿ ಶೇ 55 ರಷ್ಟು ಯುವಕರು ಇದ್ದು ಎಲ್ಲರೂ ದೇಶ ಸೇವೆ ಮಾಡಲು ಸೇನೆಗೆ ಸೇರಬೇಕು. ಅದು ಸಾಧ್ಯವಾಗದಿದ್ದರೆ ಎಲ್ಲಿರುತ್ತೇವೊ ಅಲ್ಲೇ ಗಿಡಮರಗಳನ್ನು ಬೆಳೆಸುವ, ಪರಿಸರ ಸಂರಕ್ಷಿಸುವ ಮೂಲಕ ದೇಶ ಸೇವೆ ಮಾಡಬೇಕು ಎಂದು ಸಲಹೆ ನೀಡಿದರು.
ಲಯನ್ಸ್ ಸಂಸ್ಥೆ ವಲಯಾಧ್ಯಕ್ಷ ಆರ್.ಡಿ.ರವೀಶ್, ಅಧ್ಯಕ್ಷ ಶಂಕರಪ್ಪ, ರೋಟರಿ ಸಂಸ್ಥೆ ಅಧ್ಯಕ್ಷ ಅಶೋಕ್, ವಾಸವಿ ಕ್ಲಬ್ ಅಧ್ಯಕ್ಷ ಉದಯಭಾನು, ವಾಸವಾಂಬ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕಿಶೋರ್, ನಮನ ಬಳಗದ ಅಧ್ಯಕ್ಷ ರವೀಂದ್ರ, ಮಹಾಗಣಪತಿ ಸೇವಾ ಸಮಿತಿಯ ಕಾರ್ಯಾಧ್ಯಕ್ಷ ಎ.ಜಗನ್ನಾಥ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಪುಷ್ಪಫಲತಾ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರೇಮಾ ಮಂಜುನಾಥ್, ಸ್ವಾಮಿ ವಿವೇಕಾನಂದ ಯುವ ವೇದಿಕೆಯ ಅಧ್ಯಕ್ಷ ರೆಹಮಾನ್, ತಾಲ್ಲೂಕಿನ ನಿವೃತ್ತ ಯೋಧರು ಹಾಗೂ ಕರ್ತವ್ಯ ನಿರತ ಯೋಧರು, ರಘು, ರವಿ, ಮಧು, ಧನರಾಜ್ ಯೋಧ ವಸಂತ್, ವೈ.ವಿ.ಚಂದ್ರಶೇಖರ್,ಎಸ್.ಎಲ್.ಎನ್ ಯುವಕ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಇದ್ದರು.
ವಾಸವಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಬ್ಯಾಂಡ್ ಸೆಟ್ ವಾದನ ಮೆರವಣಿಗೆಗೆ ಮೆರಗು ನೀಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.