ADVERTISEMENT

ಶೀಘ್ರ ಪರಿಹಾರ ಒದಗಿಸಲು ಕ್ರಮ

ಮಳೆ ಹಾನಿ ಪ್ರದೇಶಗಳ ನ್ಯಾಯಾಧೀಶ ರವಿಕಾಂತ ಭೇಟಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2022, 5:57 IST
Last Updated 14 ಜುಲೈ 2022, 5:57 IST
ನ್ಯಾಯಾಧೀಶ ಬಿ.ಕೆ. ರವಿಕಾಂತ ಅವರು ಮಳೆಯಿಂದ ಹಾನಿಗೊಳಗಾದ ಹಾಸನ ತಾಲ್ಲೂಕಿನ ವಿವಿಧೆಡೆ ಭೇಟಿ ನೀಡಿದರು.
ನ್ಯಾಯಾಧೀಶ ಬಿ.ಕೆ. ರವಿಕಾಂತ ಅವರು ಮಳೆಯಿಂದ ಹಾನಿಗೊಳಗಾದ ಹಾಸನ ತಾಲ್ಲೂಕಿನ ವಿವಿಧೆಡೆ ಭೇಟಿ ನೀಡಿದರು.   

ಹಾಸನ: ನಿರಂತರ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ.ರವಿಕಾಂತ ಅವರು ಭೇಟಿ ನೀಡಿದರು.

ಸಂತ್ರಸ್ತರ ಜೊತೆ ಮಾತನಾಡಿದ ಅವರು, ‘ಸರ್ಕಾರದಿಂದ ಬರಬೇಕಾದ ಪರಿಹಾರ ಶೀಘ್ರವಾಗಿ ನೀಡಲು ಕ್ರಮ ಕೈಗೊಳ್ಳುವುದಾಗಿ’ ಭರವಸೆ ನೀಡಿದರು.

ತಾಲ್ಲೂಕಿನ ರಾಜಕುಮಾರ್ ನಗರ, ಅಣಚನಹಳ್ಳಿ, ತಟ್ಟೆಕೆರೆ ಗ್ರಾಮಗಳಲ್ಲಿ ಮಳೆ ಹಾನಿ ವೀಕ್ಷಿಸಿದ ಅವರು, ಸಂಪೂರ್ಣ, ಭಾಗಶಃ ಹಾನಿಗೊಳಗಾದ ಮನೆಗಳಿಗೆ ಸರ್ಕಾರದಿಂದ ನೀಡಬಹುದಾದ ಪರಿಹಾರವನ್ನು ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಶೀಘ್ರವಾಗಿ ಕೊಡಲು ಕ್ರಮ ವಹಿಸಲಾಗುವುದು. ವಸತಿ ಕಳೆದುಕೊಂಡವರಿಗೆ ವಸತಿ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ADVERTISEMENT

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಪ್ರಕೃತಿ ವಿಕೋಪ ಸಂತ್ರಸ್ತರ ಸಂರಕ್ಷಣಾ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆ ಮೂಲಕ ಯಾವುದೇ ವಿಕೋಪದಿಂದ ಸಂತ್ರಸ್ತರಾದವರಿಗೆ ಸರ್ಕಾರದಿಂದ ಸೂಕ್ತ ಪರಿಹಾರವನ್ನು ಶೀಘ್ರವಾಗಿ ಕೊಡಿಸಲು ಪ್ರಾಧಿಕಾರವು ಶ್ರಮಿಸುತ್ತಿದೆ. ಬಾಧಿತರು ಅನುಕೂಲ ಪಡೆಯಬಹುದಾಗಿದೆ ಎಂದು ಹೇಳಿದರು.

ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ವಿವಿಧ ಇಲಾಖೆಗಳು ಸಹಕಾರ ನೀಡುತ್ತಿವೆ ಎಂದರು.

ಸ್ಥಳದಲ್ಲಿದ್ದ ಹಾಸನ ತಹಶೀಲ್ದಾರ್‌ ನಟೇಶ್, ಮನೆಗಳ ವಿವರ ಹಾಗೂ ಪ್ರಮಾಣವನ್ನು ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಎಂಜಿನಿಯರ್‌ಗಳಿಂದ ತರಿಸಿಕೊಂಡು ಪರಿಹಾರಕ್ಕಾಗಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.