ಚನ್ನರಾಯಪಟ್ಟಣ: ಪಟ್ಟಣದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್ ಪುತ್ಥಳಿ ಸ್ಥಾಪಿಸಲಾಗುವುದು. ಈ ಬಗ್ಗೆ ಸದ್ಯದಲ್ಲಿ ಸಭೆ ಕರೆದು ಚರ್ಚಿಸಲಾಗುವುದು’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ತಾಲ್ಲೂಕು ಆಡಳಿತದಿಂದ ಗುರುವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದರು.
‘ಸಾಮಾಜಿಕ ನ್ಯಾಯದಡಿ ಎಲ್ಲಾ ಜನಾಂಗದವರಿಗೆ ಸಮಾನ ಅವಕಾಶ ನೀಡಿದ ಕೀರ್ತಿ ಅಂಬೇಡ್ಕರ್ಗೆ ಸಲ್ಲುತ್ತದೆ. ಅವರು ದಲಿತರಿಗೆ ಸೀಮಿತವಲ್ಲ, ದೇಶದ ಆಸ್ತಿ. ಭಾರತವು ವೈಜ್ಞಾನಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಸದೃಢವಾಗಲು ಅಂಬೇಡ್ಕರ್ ರಚಿಸಿದ ಸಂವಿಧಾನ ಕಾರಣ’ ಎಂದರು.
ಉಪನ್ಯಾಸಕ ರತ್ನಾಕರ್ ಮಾತನಾಡಿ, ‘ಅಂಬೇಡ್ಕರ್ ಪ್ರೌಢಿಮೆ ಗಮನಿಸಿದ ವಿಶ್ವಸಂಸ್ಥೆ ಅವರ ಜನ್ಮದಿನವನ್ನು ವಿಶ್ವ ಜ್ಞಾನ ದಿನ ಎಂದು ಆಚರಿಸಿತ್ತು’ ಎಂದರು. ಪುರಸಭಾಧ್ಯಕ್ಷ ಜಿ.ಆರ್. ಸುರೇಶ್ ಮಾತನಾಡಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ಅಂಬೇಡ್ಕರ್ ಕುರಿತು ಕಲಾವಿದ ಮಂಜು ಹಿರಿಬಿಳ್ತಿ, ಸಿ.ಜಿ. ಸೋಮಶೇಖರ್, ಶಂಕರ್ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ತಹಶೀಲ್ದಾರ್ ಜೆ.ಬಿ. ಮಾರುತಿ, ಪುರಸಭೆ ಉಪಾಧ್ಯಕ್ಷ ಧರಣೀಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಎನ್. ಬನಶಂಕರಿ, ಸದಸ್ಯರಾದ ಲಕ್ಷ್ಮಿ, ಎ.ಡಿ. ವಿದ್ಯಾಪ್ರಸಾದ್, ಟಿಎಪಿಸಿಎಂಎಸ್ ಅಧ್ಯಕ್ಷ ರಮೇಶ್ ಕುಂಬಾರಹಳ್ಳಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಂಕರಮೂರ್ತಿ, ಪೀಕಾರ್ಡ್ ಬ್ಯಾಂಕ್ ಅಧ್ಯಕ್ಷ ನಂಜುಂಡೇಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ವಿಜಯಕುಮಾರ್, ಇನ್ಸ್ಪೆಕ್ಟರ್ ಜಿ.ಕೆ. ಸುಬ್ರಹ್ಮಣ್ಯ, ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ವಿ. ಮಹೇಶ್, ವೆಂಕಟೇಶ್, ಪುಟ್ಟಸ್ವಾಮಿ, ಡಿ.ಎಂ. ರವಿ, ದಾಸಯ್ಯ, ಈಶ್ವರನ್, ಸಿ.ಆರ್. ಧರ್ಮಯ್ಯ, ಶಿವಶಂಕರ ಕುಂಟೆ, ಲಕ್ಷ್ಮಣ್, ರಮೇಶ್ ಇದ್ದರು.
ಅಂಬೇಡ್ಕರ್ ಭಾವಚಿತ್ರವನ್ನು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ಕಲಾತಂಡಗಳ ನಾದಕ್ಕೆ ದಲಿತ ಮುಖಂಡರೊಂದಿಗೆ ಶಾಸಕ ಬಾಲಕೃಷ್ಣ ಹೆಜ್ಜೆ ಹಾಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.