ಆಲೂರು: ಸರ್ಕಾರ ರೂಪಿಸಿರುವ ವಿದ್ಯಾಗಮ ಕಾರ್ಯಕ್ರಮದ ಯೋಜನೆ ಯಂತೆ ಮಕ್ಕಳಿರುವಲ್ಲಿಗೇ ಶಿಕ್ಷಕರು ತೆರಳಿ ಪಾಠ ಮಾಡುತ್ತಿದ್ದು, ತಾಲ್ಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಐದರಿಂದ ಹತ್ತು ಮಕ್ಕಳನ್ನು ಒಂದೆಡೆ ಸೇರಿಸಿ ಅಂತರ ಪಾಲಿಸಿಕೊಂಡು ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ.
ಸರ್ಕಾರಿ ಪ್ರೌಢಶಾಲೆಗಳ ಶಿಕ್ಷಕರು ವಿಭಾಗಗಳನ್ನು ಮಾಡಿಕೊಂಡಿದ್ದಾರೆ. ಮಳೆಗಾಲವಾಗಿರುವುದರಿಂದ ಸಂಬಂಧಿಸಿದ ಗ್ರಾಮದ ಮನೆಯೊಂದರ ಚೌಪಡಿ, ಆರ್.ಸಿ.ಸಿ.ಕಟ್ಟಡದ ಮೇಲಿನ ಸ್ಥಳಗಳನ್ನು ಆಯ್ಕೆ ಮಾಡಿ ಅಲ್ಲಿ ಪಾಠ ಪ್ರವನಚ ನಡೆಯುತ್ತಿದೆ.
ಪ್ರತಿದಿನ ಬೆಳಿಗ್ಗೆ ದೂರದರ್ಶನದಲ್ಲಿ ಪ್ರಸಾರವಾಗುವ ವಿದ್ಯಾಗಮ ಕಾರ್ಯಕ್ರಮದಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಬದಲಿ ವ್ಯವಸ್ಥೆ ಮಾಡಿ ಶಿಕ್ಷಕರು ಬೋಧಿಸುತ್ತಿದ್ದಾರೆ. ಕಲಿಕಾಂಶಗಳ ಮಾಹಿತಿ ನೀಡಿ, ಪಠ್ಯ ಪುಸ್ತಕಗಳನ್ನು ಮನೆಯಲ್ಲಿ ಓದಲು ಸೂಚನೆ ನೀಡಲಾಗುತ್ತದೆ. ಶೈಕ್ಷಣಿಕ ಚಟುವಟಿಕೆ ಬಗ್ಗೆ ಮುಖ್ಯಶಿಕ್ಷಕರ ಸಮ್ಮುಖದಲ್ಲಿ ಶನಿವಾರ ಚರ್ಚೆ ನಡೆಸಿ ಇಲಾಖೆಗೆ ವರದಿ ನೀಡಲಾಗುತ್ತದೆ ಎನ್ನುತ್ತಾರೆ ಪಾಳ್ಯ ಹೋಬಳಿ ಮಡಬಲು ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಎಂ.ಶಿವಣ್ಣ.
ಇಂದಿನ ಸ್ಥಿತಿ ನೋಡಿದಾಗ ಪ್ರಾಚೀನ ಶಿಕ್ಷಣ ವ್ಯವಸ್ಥೆ ನೆನಪಾಗುತ್ತದೆ. ಹಿಂದೆ ಶಿಕ್ಷಣ ಕೇಂದ್ರಗಳಾಗಿ ದೇವಾಲಯಗಳು, ಮಠಮಂದಿ ರಗಳು, ಚರ್ಚ್, ಮದರಸಗಳು ಕಾರ್ಯನಿರ್ವಹಿಸುತ್ತಿದ್ದವು. ಅತ್ಯಂತ ಆಧುನಿಕತೆಗೆ ಜಾರಿ ಹೋಗುತ್ತಿದ್ದ ಶಿಕ್ಷಣ ವ್ಯವಸ್ಥೆಯು ಕೊರೊನಾದ ಕಾರಣದಿಂದ ಪ್ರಾಚೀನ ಕಾಲದ ಸ್ಥಿತಿಗೆ ಮರಳಿದಂತಾಗಿದೆ. 21ನೇ ಶತಮಾನದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಯುವಜನರು ಹೋಗುವುದನ್ನು ತಡೆಯಲು ಪ್ರಕೃತಿಯೇ ರೂಪಿಸಿದ ವ್ಯವಸ್ಥೆ ಎಂದೇ ಭಾವಿಸುವಂತಾಗಿದೆ ಎನ್ನುತ್ತಾರೆ ವಕೀಲ ಆರ್.ಬಿ.ಸುರೇಶ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.