ADVERTISEMENT

1095 ಗ್ರಾಮಗಳಲ್ಲಿ ಹಿಂಗಾರು ಬೆಳೆ ಸರ್ವೆ

ಜ.20 ರೊಳಗೆ ಪೂರ್ಣಗೊಳಿಸಲು ರೈತರ ಸಹಕಾರ ಅಗತ್ಯ: ಡಿ.ಸಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 13:42 IST
Last Updated 4 ಜನವರಿ 2021, 13:42 IST
ಹಿಂಗಾರು ಬೆಳೆ ಸಮೀಕ್ಷೆ ಕುರಿತ ಪೋಸ್ಟರ್‌ಗಳನ್ನು ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್ ಬಿಡುಗಡೆಗೊಳಿಸಿದರು. ಜಂಟಿ ಕೃಷಿ ನಿರ್ದೇಶಕ ರವಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಯೋಗೇಶ್ ಇದ್ದರು.
ಹಿಂಗಾರು ಬೆಳೆ ಸಮೀಕ್ಷೆ ಕುರಿತ ಪೋಸ್ಟರ್‌ಗಳನ್ನು ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್ ಬಿಡುಗಡೆಗೊಳಿಸಿದರು. ಜಂಟಿ ಕೃಷಿ ನಿರ್ದೇಶಕ ರವಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಯೋಗೇಶ್ ಇದ್ದರು.   

ಹಾಸನ: ಜಿಲ್ಲೆಯ 1095 ಗ್ರಾಮಗಳ 4.16 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆದಿರುವ ಹಿಂಗಾರು ಬೆಳೆ ಸಮೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು.

ಸಕಲೇಶಪುರ ತಾಲ್ಲೂಕು ಹೊರತುಪಡಿಸಿ ಇತರೆ ತಾಲ್ಲೂಕುಗಳಲ್ಲಿ ಬೆಳೆ ಸಮೀಕ್ಷೆ ಉತ್ಸವ ನಡೆಯಲಿದೆ.ಮುಂಗಾರು ಬೆಳೆಯ ಸರ್ವೆಗೆ ಬಳಸಿಕೊಂಡ ಖಾಸಗಿ ಪ್ರತಿನಿಧಿಗಳ ನೆರವು ಪಡೆದು ಹಿಂಗಾರು ಬೆಳೆ ಸಮೀಕ್ಷೆ ಕೈಗೊಳಲಾಗುವುದು. ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಪ್ರತಿ ಹೋಬಳಿಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು. ಗ್ರಾಮಲೆಕ್ಕಾಧಿಕಾರಿಗಳನ್ನು ಮೇಲ್ವಿಚಾರಕರನ್ನಾಗಿ ನೇಮಿಸಲಾಗಿದೆ. ಜ.20 ರೊಳಗೆ ಪೂರ್ಣಗೊಳಿಸಬೇಕಾಗಿದ್ದು ರೈತರು ಸಹಕರಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಜಿಲ್ಲೆಯಲ್ಲಿ ಹೆಚ್ಚಾಗಿ ರಾಗಿ, ಮೆಕ್ಕೆಜೋಳ, ಹುರುಳಿ ಇತ್ಯಾದಿ ಬೆಳೆಗಳನ್ನು ಹಿಂಗಾರಿನಲ್ಲಿ ಬೆಳೆಯಲಾಗಿದೆ. ಬೆಳೆ ಕಟಾವು ಆಗುವ ಮುನ್ನ ಸರ್ವೆ ಮಾಡಬೇಕಾಗಿರುವುದರಿಂದ ರೈತರು ಸಹ ಆ್ಯಪ್ ಮೂಲಕ ನೇರವಾಗಿ ಸರ್ವೆ ಮಾಡಿ ನಮೂದಿಸಬಹುದಾಗಿದೆ. ರೈತರಿಗೆ ಸರ್ಕಾರದಿಂದ ಬರುವ ಬೆಳೆ ಪರಿಹಾರಕ್ಕೆ ಮೂಲಭೂತ ಮಾಹಿತಿಯನ್ನಾಗಿ ಈ ಸರ್ವೆ ಪರಿಗಣಿಸಲಾಗುವುದು ಎಂದು ವಿವರಿಸಿದರು.

ADVERTISEMENT

ಸರ್ಕಾರದ ನಿರ್ದೇಶನದಂತೆ ಬೆಳೆ ಸರ್ವೆಯಲ್ಲಿ ಆಧಾರ್ ಸಂಖ್ಯೆ ನಮೂದಿಸಬೇಕು. ಸಿಬ್ಬಂದಿಗಳು ಹಾಜರಾದ ಸಮಯಕ್ಕೆ ರೈತರು ತಮ್ಮ ಆಧಾರ್ ಕಾರ್ಡ್ ಪ್ರತಿಗಳನ್ನು ನೀಡಿ ಸಹಕರಿಸಬೇಕು ಎಂದರು

ರಬಿ ಬೆಳೆ ಸಮೀಕ್ಷೆ ಜ. 5ರಿಂದ ಆರಂಭವಾಗುವುದು. ಅಗತ್ಯ ಸಕಲ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ. ರೈತರು ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಜಂಟಿ ಕೃಷಿ ನಿರ್ದೇಶಕ ರವಿ, ತೋಟಗಾರಿಕೆ ಉಪನಿರ್ದೇಶಕ ಯೋಗೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.