ಹಳೇಬೀಡು: ದಾವಣಗೆರೆಯ ಬೆಣ್ಣೆ ದೋಸೆ, ಉತ್ತರದ ಕರ್ನಾಟಕದ ಜೋಳದ ರೊಟ್ಟಿ- ಎಣ್ಣೆಗಾಯಿ, ಪುಂಡಿಪಲ್ಯ, ಮೇಲುಕೋಟೆಯ ಪುಳಿಯೊಗರೆ, ಮದ್ದೂರಿನ ವಡೆ... ಹೀಗೆ ತರಹೇವಾರಿ ತಿಂಡಿ–ತಿನಿಸುಗಳು ಹಳೇಬೀಡಿನಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಆಹಾರ ಪ್ರಿಯರ ಬಾಯಲ್ಲಿ ನೀರೂರಿಸಿದವು.
ಮಹೋತ್ಸವದ ಪ್ರಯುಕ್ತ ರಾಜ್ಯ ವಿವಿಧ ಭಾಗಗಳಿಂದ ವ್ಯಾಪಾರಿಗಳು ಮಳಿಗೆಗಳನ್ನು ತೆರೆದಿದ್ದಾರೆ. ಉಪಾಹಾರ ಕೇಂದ್ರ, ವಿವಿಧ ತಿಂಡಿ–ತಿನಿಸು ಮಳಿಗೆಗಳಿದ್ದು, ಉತ್ತರ ಕರ್ನಾಟಕ ಶೈಲಿಯ ತಿಂಡಿ– ತಿನಿಸುಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.
ಜೋಳದ ರೊಟ್ಟಿ ಹಾಗೂ ಬೆಣ್ಣೆದೋಸೆಗೆ ಜನರು ಮುಗಿಬಿದ್ದರು. ಹಲ್ಲುಗಳಿಗೆ ಕೆಲಸ ನೀಡುತ್ತ ಖಡಕ್ ರೊಟ್ಟಿ, ಪುಂಡಿಪಲ್ಯವನ್ನು ಸಹ ಸಾಕಷ್ಟು ಜನರು ಚಪ್ಪರಿಸಿದರು. ಉತ್ತರ ಕರ್ನಾಟಕ ಶೈಲಿಯ ಬದನೆಕಾಯಿಯಿಂದ ಮಾಡಿದ ಎಣ್ಣೆಗಾಯಿ ಜೊತೆಗೆ ಜೋಳದ ರೊಟ್ಟಿ, ಶೇಂಗಾ ಹಾಗೂ ವಿವಿಧ ಕಾಳಿನಿಂದ ತಯಾರಿಸಿದ ಚಟ್ನಿಪುಡಿ ಜೊತೆ ಸವಿದರು. ಇದರೊಂದಿಗೆ ಮೊಸರು, ತುಪ್ಪವನ್ನೂ ಹಾಕಿಕೊಂಡು ತಿಂದರು.
ಮೇಲುಕೋಟೆಯ ಪುಳಿಯೊಗರೆ ಸ್ಟಾಲ್ನಲ್ಲಿ ಒಗ್ಗರಣೆ ಘಮಲು ಜನರನ್ನು ಸೆಳೆಯುತ್ತಿತ್ತು. ಹುಬ್ಬಳ್ಳಿಯ ಮಿರ್ಚಿ ಮಂಡಕ್ಕಿ, ಚುರುಮುರಿ, ಪಾನಿಪುರಿ, ವಿವಿಧ ಬಗೆಯ ಗೋಬಿಮಂಚೂರಿ ವ್ಯಾಪಾರವೂ ಜೋರಾಗಿತ್ತು. ಅಕ್ಕಿರೊಟ್ಟಿ ಚಟ್ನಿ, ಹುಣಸೆಂಡಿ (ಹುಣಸೆರಸ, ಕಾರ, ಉಪ್ಪಿನ ರಸ), |ಪಲಾವ್, ಚಿತ್ರಾನ್ನ, ಊಟದ ಹೋಟೆಲ್ಗಳು ಜನರ ಗಮನ ಸೆಳೆದವು.
ಮಹೋತ್ಸವದಲ್ಲಿ ಸುಮಾರು 70 ಮಳಿಗೆಗಳು ಇದ್ದವು. ಕೆಲ ಮಳಿಗೆಗಳಲ್ಲಿ ಬೆಲೆ ದುಬಾರಿಯಾಗಿದೆ ಎಂಬ ಮಾತು ಸಹ ಹಲವರಿಂದ ಕೇಳಿ ಬಂತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.