ಆಲೂರು: ದೇವಸ್ಥಾನಗಳು ಮನುಷ್ಯರಿಗೆ ಶಾಂತಿ ಮತ್ತು ನೆಮ್ಮದಿ ನೀಡುವ ಧಾರ್ಮಿಕ ಆಚರಣೆಯ ಕೇಂದ್ರಗಳು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಚಿಗಳೂರು ಗ್ರಾಮದ ಚೌಡೇಶ್ವರಿ ದೇವಿಗೆ ನೂತನ ರಜತ ಕವಚ ಧಾರಣೆ, ಬಂಟನ ದೇವಸ್ಥಾನ ಲೋಕಾರ್ಪಣೆಯಲ್ಲಿ ಅವರು ಮಾತನಾಡಿದರು. ಪ್ರಪಂಚ ತಂತ್ರಜ್ಞಾನದಲ್ಲಿ ಎಷ್ಟು ಮುಂದುವರಿದರೂ ಧಾರ್ಮಿಕ ಭಾವನೆ ನೆಲೆನಿಂತದೆ. ನಮ್ಮ ದೇಶದ ಜನರು ದೇವಸ್ಥಾನ ಮಠ ಮಂದಿರಗಳನ್ನು ಬಿಟ್ಟು ಇರಲು ಸಾಧ್ಯವೇ ಇಲ್ಲ. ಪ್ರತಿಕ್ಷಣ, ಪ್ರತಿನಿಮಿಷ ದೇವರ ಸ್ಮರಣೆ ಮಾಡುತ್ತಾ ನಮ್ಮ ಕರ್ತವ್ಯ ನಿರ್ವಹಿಸಿದರೆ ಯಾವ ಕಷ್ಟವೂ ಸುಳಿಯುವುದಿಲ್ಲ ಎಂದರು.
ಧಾರ್ಮಿಕ ಆಚರಣೆ ಮತ್ತು ದೇವಾಲಯಗಳು ಗ್ರಾಮದ ಜನರನ್ನು ಒಗ್ಗೂಡಿಸುತ್ತವೆ. ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಲಭಿಸುವ ಅನುದಾನದಲ್ಲಿ ಎಲ್ಲ ಗ್ರಾಮಗಳಿಗೂ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.
‘ಚೌಡೇಶ್ವರಿ ದೇವಸ್ಥಾನದಿಂದ ಅಚ್ಚಗೌಡನಹಳ್ಳಿಯವರೆಗೆ ರಸ್ತೆ ದುರಸ್ತಿಯಾಗಬೇಕು. ಮಳೆಗೆ ರಸ್ತೆ ಗುಂಡಿ ಬಿದ್ದಿದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಿ.ವಿ.ಲಿಂಗರಾಜು ಶಾಸಕರ ಗಮನಕ್ಕೆ ತಂದರು.
ಕಲ್ಯಾಣಗೌಡ, ಕೆ. ಎಂ. ಎಫ್ ನಿರ್ದೇಶಕ ಪಿ.ಎಲ್. ನಿಂಗರಾಜ್, ಹನುಮಂತೆಗೌಡ, ಗ್ರಾಮ ಪಂಚಾಯಿತಿ ಸದಸ್ಯ ಅಂಬುಜಾ, ಅರ್ಚಕ ಗಿರೀಶ್, ಮಾಜಿ ಸದಸ್ಯ ಸಿ. ಎಲ್. ಕುಮಾರಸ್ವಾಮಿ, ದೇವರಾಜು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.