
ಸಂತೇಮರಹಳ್ಳಿ: ಸಮೀಪದ ಕುದೇರು ಗ್ರಾಮದ ಪರಿಶಿಷ್ಟ ಸಮುದಾಯ ಬೀದಿಯಲ್ಲಿ ಎಸ್ಸಿಎಸ್ಪಿ ಯೋಜನೆಯಡಿ ಕಾಂಕ್ರೀಟ್ ರಸ್ತೆ ಹಾಗೂ ಬಾಕ್ಸ್ ಚರಂಡಿ ಕಾಮಗಾರಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಈಚೆಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಗ್ರಾಮದ ಪರಿಶಿಷ್ಟ ಸಮುದಾಯ ಬೀದಿಯಲ್ಲಿ 10 ವರ್ಷಗಳ ಹಿಂದೆ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರ ಕಳಪೆ ಮಾಡಿದ್ದು, ಜನರು ದೂಳಿನಿಂದ ತೊಂದರೆ ಅನುಭವಿಸುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಸಮುದಾಯದ ಮಂಟೇಸ್ವಾಮಿ ದೇವಸ್ಥಾನದ ಆವರಣದಿಂದ ಮುಖ್ಯ ರಸ್ತೆ ವರೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ₹30 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕಾಮಗಾರಿಯನ್ನು ಕೆಆರ್ಐಡಿಎಲ್ ಸಂಸ್ಥೆಗೆ ವಹಿಸಲಾಗಿದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಮುದಾಯ ಮುಖಂಡರು ಯಾವುದೇ ಸಮಸ್ಯೆಗಳು ಉಂಟಾಗದ ರೀತಿಯಲ್ಲಿ ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು ಎಂದರು.
ಗ್ರಾಮದಲ್ಲಿ ₹ 25 ಲಕ್ಷ ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಮಾಡುವ ನಿಟ್ಟಿನಲ್ಲಿ 3 ತಿಂಗಳ ಹಿಂದೆ ಭೂಮಿ ಪೂಜೆ ನೆರವೇರಿಸಲಾಗಿದೆ. ಇನ್ನು ಕೂಡ ಸಮುದಾಯ ಭವನ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅಂಬೇಡ್ಕರ್ ಸಂಘದವರು ಹಾಗೂ ಮುಖಂಡರು ಮುಂದಾಗದೇ ಇರುವುದು ಬೇಸರದ ಸಂಗತಿಯಾಗಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲ, ಸದಸ್ಯ ಕೆ.ಎಂ.ಅಶೋಕ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಮಹದೇವಯ್ಯ, ಕೆ.ಎಂ.ರಾಜೇಂದ್ರಸ್ವಾಮಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ವಾಸುಪಾಲ್, ಯಜಮಾನರಾದ ಗುರುಸಿದ್ದಯ್ಯ, ರಂಗಪ್ಪ, ಮುಖಂಡರಾದ ನಾಗರಾಜು, ಎಸ್.ಮಹದೇವಯ್ಯ, ವೀರಭದ್ರಸ್ವಾಮಿ, ಕುದೇರು ಲಿಂಗಣ್ಣ, ಉಮ್ಮತ್ತೂರು ಶಿವಣ್ಣ, ಗಣಗನೂರು ನಾಗಯ್ಯ, ಸಂತೇಮರಹಳ್ಳಿ ಪಶಿ, ಹೊನ್ನೂರು ರಾಘವೇಂದ್ರ, ಸೊತ್ತನಹುಂಡಿ ಸೋಮಣ್ಣ, ಜನ್ನೂರುಹೊಸೂರು ದೊರೆ, ಶಿವಕುಮಾರ್, ಬಸವರಾಜು, ಅಂಗಡಿ ಸಿದ್ದರಾಜು, ಕೈಲಾಸ್, ಪುಟ್ಟಸ್ವಾಮಿ, ಶ್ರೀಕಂಠ, ಅನುಶಂಕರ್, ಸಿದ್ದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.