ಹೊಳೆನರಸೀಪುರ: ಇಲ್ಲಿನ ಹಾಸನ– ಮೈಸೂರು ರಸ್ತೆಯ ಪೆಟ್ರೋಲ್ ಬಂಕ್ಗೆಸೋಮವಾರ ಮಧ್ಯಾಹ್ನ ಪೆಟ್ರೋಲ್ ಹಾಕಿಸಲು ಬಂದ ಕಾರು ಮಾಲೀಕರ ಗಮನ ಬೇರೆಡೆ ಸೆಳೆದು ₹4.80 ಲಕ್ಷವನ್ನು ಕಳ್ಳರು ಲಪಟಾಯಿಸಿದ್ದಾರೆ.
ತಾಲ್ಲೂಕಿನ ಕಸಬಾ ಹೋಬಳಿಯ ತಟ್ಟೇಕೆರೆ ಗ್ರಾಮದ ವೆಂಕಟೇಶ್ ಅವರ ಪುತ್ರ ಟಿ.ವಿ.ಸತೀಶ್ ಅವರು ಶುಂಠಿ ಮಾರಿ ಬಂದಿದ್ದ ₹4.80 ಲಕ್ಷ ಹಣವನ್ನು ಹಾಸನದ ಆ್ಯಕ್ಸಿಸ್ ಬ್ಯಾಂಕಿಗೆ ಕಟ್ಟಲು ಹೊರಟ್ಟಿದ್ದರು. ದಾರಿ ಮಧ್ಯೆ ಪೆಟ್ರೋಲ್ ಹಾಕಿಸಲು ಬಂಕ್ಗೆ ಹೋಗಿದ್ದಾರೆ. ಆ ವೇಳೆ ಮೊಬೈಲ್ ಕರೆ ಬಂದ ಕಾರಣ ಕಾರಿನಿಂದ ಹೊರ ಬಂದು ಮಾತನಾಡಿ ಹೊರಡಲು ಮುಂದಾಗಿದ್ದಾರೆ. ಆ ಸಮಯದಲ್ಲಿ ಬಂದ ಅಪರಿಚಿತ ವ್ಯಕ್ತಿ, ‘10 ರೂಪಾಯಿ ನೋಟುಗಳು ನಿಮ್ಮ ಜೇಬಿನಿಂದ ಬಿದ್ದಿವೆ ನೋಡಿ’ ಎಂದಿದ್ದಾನೆ. ಸತೀಶ್ ಕಾರಿನಿಂದ ಇಳಿದು ಬಿದ್ದಿದ್ದ ನೋಟುಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಕಾರಿನ ಹಿಂಬದಿ ಸೀಟ್ನಲ್ಲಿದ್ದ ಹಣದ ಬ್ಯಾಗ್ಅನ್ನು ಕಳ್ಳರು ಕದ್ದಿದ್ದಾರೆ.
ಸತೀಶ್ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಪೆಟ್ರೋಲ್ ಬಂಕಿನಲ್ಲಿದ್ದ ಸಿ.ಸಿ. ಟಿ.ವಿ. ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸಿದರು.
‘ಮಾಸ್ಕ್ ಧರಿಸಿದ್ದ ಕೆಲವು ವ್ಯಕ್ತಿಗಳಚಲನವಲನ ಗುರುತಿಸಿದ್ದೇವೆ. ಸಾರ್ವಕನಿಕರಿಗೆ ಎಷ್ಟೇ ತಿಳವಳಿಕೆ ನೀಡಿದರೂ ಇನ್ನೂ ಜಾಗೃತರಾಗಿಲ್ಲ. ಹಣ ತೆಗೆದುಕೊಂಡು ಹೋಗುವ ವೇಳೆ ಹೆಚ್ಚಿನ ಜಾಗೃತಿ ವಹಿಸಬೇಕು’ ಎಂದು ನಗರ ಠಾಣೆ ಎಸ್.ಐ. ಕುಮಾರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.