ADVERTISEMENT

ಹಾಸನ ನಗರದಲ್ಲಿ ಮೂರನೇ ದಿನವೂ ಜನಸಂಚಾರ

ಸಕಾರಣವಿಲ್ಲದೆ ರಸ್ತೆಗಿಳಿದ ವಾಹನ ಸವಾರರಿಗೆ ದಂಡ

​ಪ್ರಜಾವಾಣಿ ವಾರ್ತೆ
Published 12 ಮೇ 2021, 11:34 IST
Last Updated 12 ಮೇ 2021, 11:34 IST
ಹಾಸನದಲ್ಲಿ ದ್ವಿಚಕ್ರ ವಾಹನದಲ್ಲಿ ಆಮ್ಲಜನಕ ಸಿಲಿಂಡರ್ ತೆಗೆದುಕೊಂಡು ಹೋಗುತ್ತಿರುವ ದೃಶ್ಯ.
ಹಾಸನದಲ್ಲಿ ದ್ವಿಚಕ್ರ ವಾಹನದಲ್ಲಿ ಆಮ್ಲಜನಕ ಸಿಲಿಂಡರ್ ತೆಗೆದುಕೊಂಡು ಹೋಗುತ್ತಿರುವ ದೃಶ್ಯ.   

ಹಾಸನ: ಲಾಕ್‌ಡೌನ್‌ ಜಾರಿಗೊಂಡ ಮೂರನೇ ದಿನವಾದ ಬುಧವಾರ ಪೊಲೀಸರು ಅಗತ್ಯವಸ್ತುಗಳ ಖರೀದಿಗೆ ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದರಿಂದ ಬೆಳಗ್ಗೆ 10 ಗಂಟೆವರೆಗೆ ನಗರದಲ್ಲಿ ಜನ ಸಂಚಾರ ಕಂಡು ಬಂತು.

ನಗರ ಸಾರಿಗೆ ಬಸ್ ನಿಲ್ದಾಣ, ಎಪಿಎಂಸಿಗೆ ದ್ವಿಚಕ್ರ ವಾಹನಗಳಲ್ಲಿ ಬಂದ ಸಾರ್ವಜನಿಕರು ತರಕಾರಿ, ಹೂ, ಹಣ್ಣುಗಳನ್ನು ಖರೀದಿಸಿದರು. ದಿನಸಿ ಅಂಗಡಿಗಳು ನಿಗದಿತ ಸಮಯದವರೆಗೂ ತೆರೆದಿದ್ದವು. ಹತ್ತು ಗಂಟೆ ಬಳಿಕ ಬಹುತೇಕ ಅಂಗಡಿಗಳು ಬಂದ್ ಮಾಡಿದವು. ಬಾಗಿಲು ತೆರೆದಿದ್ದ ಅಂಗಡಿಗಳನ್ನು ಪೊಲೀಸರು ಬಂದ್ ಮಾಡಿಸಿ, ಎಚ್ಚರಿಕೆ ನೀಡಿದರು.

ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಜಿಲ್ಲಾಡಳಿತ ವಾರದ ಸಂತೆಗಳನ್ನು ರದ್ದುಗೊಳಿಸಿದೆ. ಸಂತೆ ರದ್ದಗೊಳಿಸಿದ್ದರೂ ನಗರಸಭೆ ಸಂತೆ ಮೈದಾನಕ್ಕೆ ಜಾನುವಾರುಗಳು, ಕೃಷಿ ಉತ್ಪನ್ನಗಳೊಂದಿಗೆ ಮಾರಾಟಕ್ಕೆಂದು ಬಂದವರಿಗೆ ಸಂತೆ ರದ್ದುಪಡಿಸಿರುವ ಬಗ್ಗೆ ನಗರಸಭೆ ಅಧಿಕಾರಿಗಳು ಜಾಗೃತಿ ಮೂಡಿಸಿ ವಾಪಸ್‌ ಕಳುಹಿಸಿದರು.

ADVERTISEMENT

ಬಿ.ಎಂ ರಸ್ತೆ, ಎಂ.ಜಿ. ರಸ್ತೆ, ಕಸ್ತೂರಾ ಬಾ ರಸ್ತೆ, ಎನ್‌.ಆರ್‌.ವೃತ್ತ, ಹೇಮಾವತಿ ಪ್ರತಿಮೆ ಹಾಗೂ ಹಲವು ಕಡೆ ವಾಹನ ಸಂಚಾರ ವಿರಳವಾಗಿತ್ತು. ಆದರೆ ಬಡಾವಣೆಗಳಲ್ಲಿ ಜನರು ಎಂದಿನಂತೆ ಓಡಾಡುತ್ತಿದ್ದರು. ಅವಧಿ ಮುಗಿದ ಬಳಿಕ ಸಕಾರಣವಿಲ್ಲದೆ ಬಂದಿದ್ದವರ ದ್ವಿಚಕ್ರ ವಾಹನ ಮತ್ತು ಕಾರುಗಳನ್ನು ಪೊಲೀಸರು ಜಪ್ತಿ ಮಾಡಿ, ದಂಡ ವಿಧಿಸಿದರು. ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಯಿತು.

ಔಷಧ ಅಂಗಡಿ, ಆಸ್ಪತ್ರೆಗಳು‌, ಪೆಟ್ರೋಲ್‌ ಬಂಕ್, ಹಾಪ್‌ಕಾಮ್ಸ್‌, ಹಾಲಿನ ಬೂತ್‌ ಎಂದಿನಂತೆ ಕಾರ್ಯನಿರ್ವಹಿಸಿದವು. ಆಟೊ ಸಂಚಾರವೂ ವಿರಳವಾಗಿತ್ತು. ಹೋಟೆಲ್‌ಗಳಲ್ಲಿ ಪಾರ್ಸೆಲ್‌ ಸೇವೆಗೆ ಅವಕಾಶ ಇತ್ತು.

ನಗರ ಪ್ರವೇಶಿಸುವ ಹಾಗೂ ನಗರದಿಂದ ಹೊರಗೆ ಹೋಗುವ ವಾಹಗಳನ್ನು ತೀವ್ರ ತಪಾಸಣೆ ಮಾಡಲಾಗುತ್ತಿದೆ. ಜಿಲ್ಲಾ ಗಡಿಗಳನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಬ್ಯಾರಿಕೇಡ್‌ ಹಾಕಲಾಗಿದೆ. ಅಗತ್ಯ ಸೇವೆ ಒದಗಿಸುವ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದೆಯಾದರೂ ತಪಾಸಣೆ ಮಾಡಿ ಬಿಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.