ಹಳೇಬೀಡು: ಟೊಮೆಟೊ ಬೆಲೆ ಕುಸಿದಿರುವುದರಿಂದ ಕಂಗೆಟ್ಟಿರುವ ರೈತರು, ಟೊಮೆಟೊವನ್ನು ರಸ್ತೆ ಬದಿಯಲ್ಲಿ ಸುರಿಯುತ್ತಿದ್ದಾರೆ.
ಬೇಲೂರು ರಸ್ತೆ, ಹಗರೆ ರಸ್ತೆ ಹಾಗೂ ದ್ವಾರಸಮುದ್ರ ಕೆರೆ ಏರಿಯ ಮೇಲೆ 10ಕ್ಕೂ ಹೆಚ್ಚಿನ ಕಡೆಗಳಲ್ಲಿ ಟೊಮೆಟೊವನ್ನು ಸುರಿಯಲಾಗಿದೆ.
ಈ ಭಾಗದಲ್ಲಿ ಬೆಳೆದ ಟೊಮೆಟೊವನ್ನು ಮಂಗಳೂರು ಭಾಗದ ವ್ಯಾಪಾರಿಗಳು ಹೆಚ್ಚಾಗಿ ಖರೀದಿ ಮಾಡುತ್ತಿದ್ದರು. ಆದರೆ, ಚಾರ್ಮಾಡಿ ಘಾಟ್ ಬಂದಾಗಿರುವುದರಿಂದ ಆ ಭಾಗದ ವ್ಯಾಪಾರಿಗಳು ಇತ್ತ ಸುಳಿಯುತ್ತಿಲ್ಲ. ಹಳೇಬೀಡು, ಬೇಲೂರು, ಹಾಸನದ ಮಾರುಕಟ್ಟೆಗಳಲ್ಲಿ 15 ಕೆ.ಜಿ. ತೂಕದ ಬಾಕ್ಸ್ ಕೇವಲ ₹30ಕ್ಕೆ ಮಾರಾಟವಾಗುತ್ತಿದೆ. ರೈತರಿಗೆ ಸಾಗಣೆ ವೆಚ್ಚವೂ ಸಿಗುತ್ತಿಲ್ಲ ಎಂದು ರೈತ ಎಚ್.ಸಿ.ಚೇತನ್ ಅಳಲು ತೋಡಿಕೊಂಡರು.
ಟೊಮೆಟೊ ಬೆಳೆಯಲು ಸಾವಿರಾರು ರೂಪಾಯಿ ಖರ್ಚು ಮಾಡಬೇಕು. ಎಕರೆ ಟೊಮೆಟೊ ಬೆಳೆಯಲು ₹1 ಲಕ್ಷಕ್ಕೂ ಹೆಚ್ಚಿನ ಹಣ ವೆಚ್ಚವಾಗುತ್ತದೆ. ಮಳೆ ಬಿದ್ದರೂ ರೈತರಿಗೆ ಆಗುವ ನಷ್ಟವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ ಎಂದು ಗೋಣಿಸೋಮೇನಹಳ್ಳಿ ಶಿವಕುಮಾರ್ ಹೇಳಿದರು.
ಹಳೇಬೀಡಿನ ಕೃಷಿ ಮಾರುಕಟ್ಟೆಯಲ್ಲಿ ಶೀತಲೀಕರಣ ಘಟಕ ಸ್ಥಾಪಿಸಬೇಕು ಎಂದು ರೈತ ಎಚ್.ಸಿ.ಪ್ರವೀಣ್ ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.