ಹೆತ್ತೂರು (ಹಾಸನ ಜಿಲ್ಲೆ): ಹೆತ್ತೂರು ಸಮೀಪದ ಕುಂಬ್ರಹಳ್ಳಿಯ ವ್ಯಾಪಾರಿ ಪರಮೇಶ್, ಸಣ್ಣ ಕಾಫಿ ಬೆಳೆಗಾರರಿಗೆ ಕೋಟ್ಯಂತರ ರೂಪಾಯಿ ವಂಚಿಸಿ ನಾಪತ್ತೆಯಾಗಿದ್ದಾನೆ.
ಶುಕ್ರವಾರಸಂತೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ 60ಕ್ಕೂ ಹೆಚ್ಚು ಸಣ್ಣ ಕಾಫಿ ಬೆಳೆಗಾರರಿಗೆ ಸುಮಾರು ₹ 5 ಕೋಟಿಗೂ ಹೆಚ್ಚು ಹಣ ನೀಡದೇ ವಂಚಿಸಿದ್ದಾನೆ ಎನ್ನಲಾಗಿದೆ.
ಹೆತ್ತೂರು ಮತ್ತು ಯಸಳೂರು ಹೋಬಳಿಯ ಗ್ರಾಮಗಳಲ್ಲಿ 10 ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದ ಈತ, ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ಬೆಲೆ ನೀಡಿ ಬೆಳೆಗಾರರರಿಂದ ಕಾಫಿ, ಕಾಳುಮೆಣಸನ್ನು ಖರೀದಿಸುತ್ತಿದ್ದ. ಇತ್ತೀಚಿನ ದಿನಗಳಲ್ಲಿ ಫಸಲು ಪಡೆದ ವ್ಯಾಪಾರಿ, ಬೆಳೆಗಾರರಿಗೆ ತಿಂಗಳ ಬಡ್ಡಿ ನೀಡುವುದಾಗಿ ಮಾರಾಟದ ಹಣವನ್ನು ತಾನೇ ಇಟ್ಟುಕೊಂಡಿದ್ದ. ಕೆಲವು ತಿಂಗಳ ಬಡ್ಡಿಯನ್ನು ಮಾತ್ರ ನೀಡಿದ್ದ ಎಂದು ತಿಳಿದುಬಂದಿದೆ.
ವ್ಯಾಪಾರಿಯು ಹದಿನೈದು ದಿನಗಳಿಂದ ಕಾಣೆಯಾಗಿರುವ ವಿಷಯ ತಿಳಿದ ಹಾಡ್ಲಹಳ್ಳಿ ಗ್ರಾಮದ ಸಂಪತ್ತು ಎಂಬುವವವರು, ಆತನ ವಿರುದ್ಧ ಯಸಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.