ಅರಕಲಗೂಡು: ಅಡಿಕೆ ಬೊಮ್ಮನ ಹಳ್ಳಿ ಏತನೀರಾವರಿ ಯೋಜನೆಯು ಕಸಬಾ ಹೋಬಳಿಯ 33 ಗ್ರಾಮಗಳ 850 ಎಕರೆ ಕೃಷಿ ಜಮೀನಿಗೆ ನೀರೊದಗಿಸಲಿದೆ ಎಂದು ಶಾಸಕ ಎ. ಮಂಜು ತಿಳಿಸಿದರು.
ಏತನೀರಾವರಿ ಯೋಜನೆಯಿಂದ ನೀರು ಹರಿಸುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ‘2007ರಲ್ಲಿ ಪೂರ್ಣಗೊಂಡಿರುವ ಈ ಯೋಜನೆಯಿಂದ 65 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ವಿತರಣಾ ನಾಲೆಗಳ ನಿರ್ಮಾಣಕ್ಕೆ ವಶಪಡಿಸಿ ಕೊಂಡಿರುವ 359 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ 169 ಎಕರೆಗೆ ಪರಿಹಾರ ಧನ ವಿತರಿಸಲಾಗಿದೆ’ ಎಂದರು.
ಪ್ರಸ್ತುತ ₹ 2.5 ಕೋಟಿ ಹಣ ಬಿಡುಗಡೆಯಾಗಿದ್ದು ಉಳಿದ 120 ಎಕರೆ ಪ್ರದೇಶ ವ್ಯಾಪ್ತಿಗೆ ಪರಿಹಾರಧನ ವಿತರಿಸಲು ₹ 34 ಕೋಟಿ ಹಣ ಅಗತ್ಯವಿದ್ದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
ದಶಕ ಕಳೆದರೂ ಪರಿಹಾರ ಧನ ವಿತರಿಸಲು ಸರ್ಕಾರದ ಗಮನ ಸೆಳೆದು ಕ್ರಮ ವಹಿಸಲಾಗುವುದು. ರೈತರು ಅರೆ ನೀರಾವರಿ ಬೆಳೆ ಬೆಳೆಯುವುದು ಸೂಕ್ತವಾಗಿದ್ದು ಇದು ಆರ್ಥಿಕವಾಗಿ ಲಾಭ ತರಲಿದೆ ಎಂದರು.
ಮುಖಂಡ ನರಸೇಗೌಡ, ಎಂಜಿನಿಯರ್ ಸಿದ್ದರಾಜು,ಶಿವಕುಮಾರ್ ಉಪಸ್ಥಿತರಿದ್ದರು.
ಸಂಪರ್ಕ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ: ತಾಲ್ಲೂಕಿನ ಮಲ್ಲಿ ಪಟ್ಟಣ ಹೋಬಳಿಯ ವಿವಿಧ ಗ್ರಾಮಗಳಲ್ಲಿ ₹1.67 ಕೋಟಿ ವೆಚ್ಚದಲ್ಲಿ ಸಂಪರ್ಕ ರಸ್ತೆ ನಿರ್ಮಾಣ ಕಾರ್ಯಕ್ಕೆ ಶಾಸಕ ಮಂಜು ಶನಿವಾರ ಭೂಮಿ ಪೂಜೆ ನೆರವೇರಿಸಿದರು.
‘ಅಂಬಿಗೋಡನಹಳ್ಳಿ, ಸಿಂಗನಕುಪ್ಪೆ, ಮಾಗಲು ಕೊಪ್ಪಲು ಗ್ರಾಮಗಳಿಗೆ ತಲಾ ₹20 ಲಕ್ಷ, ಬಸವನಹಳ್ಳಿ ₹25 ಲಕ್ಷ, ಯಡಿಯೂರು ರೂ 35 ಲಕ್ಷ, ಬೆಮ್ಮತ್ತಿ ₹ 22 ಲಕ್ಷ ಹಾಗೂ ಕಾಕೋಡನಹಳ್ಳಿ ಗ್ರಾಮಕ್ಕೆ ₹25 ಲಕ್ಷ ಹಣ ನೀಡಲಾಗಿದೆ. ಕ್ಷೇತ್ರಕ್ಕೆ ಒದಗಿಸಿದ್ದ ₹10 ಕೋಟಿ ಹಣದಲ್ಲಿ ಜಿಪಂ ಅನುದಾನದಲ್ಲಿ ಮಲ್ಲಿ ಪಟ್ಟಣ ಹೋಬಳಿಗೆ ₹1.67 ಕೋಟಿ ಅನುದಾನ ನೀಡಲಾಗಿದೆ. ಗುಣಮಟ್ಟದ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಗ್ರಾಮಸ್ಥರು ಸಹ ಕಾಮಗಾರಿ ಬಗ್ಗೆ ಗಮನ ಹರಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.