ಹಾಸನ: ಸೀಮೆಎಣ್ಣೆ ಸುರಿದು ಪತ್ನಿಯ ಕೊಲೆಗೆ ಯತ್ನಿಸಿ, ತಲೆಮರೆಸಿಕೊಂಡಿರುವ ಆರೋಪಿ ಶ್ರೀಮಂತ್ನನ್ನು ಕೂಡಲೇ ಬಂಧಿಸುವಂತೆ ಮಹಿಳಾ ಧ್ವನಿ ಸಮಾಜ ಸೇವಾ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಅನ್ನಪೂರ್ಣಗೌಡ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಸಂತೆ ಸಮೀಪದ ಶೆಟ್ಟಿಹಳ್ಳಿ ಗ್ರಾಮದ ಸುಶ್ಮಿತಾ ಅವರನ್ನು ಆರು ತಿಂಗಳ ಹಿಂದೆ ಸಕಲೇಶಪುರ ತಾಲ್ಲೂಕು ಹೊಸೂರು ಗ್ರಾಮದ ಶ್ರೀಮಂತ್ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು ಎಂದರು.
ಬಳಿಕ ಶ್ರೀಮಂತ್, ವರದಕ್ಷಿಣೆ ತರುವಂತೆ ಸುಶ್ಮಿತಾಳಿಗೆ ಕಿರುಕುಳ ನೀಡುತ್ತಿದ್ದ. ಇದೇ ವಿಚಾರಕ್ಕೆ ಇತ್ತೀಚೆಗೆ ಜಗಳ ತೆಗೆದು, ಸುಶ್ಮಿತಾ ಮೇಲೆ ಹಲ್ಲೆ ನಡೆಸಿ, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಿದರು.
ಈ ಸಂಬಂಧ ಯಸಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ವಿರುದ್ಧ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಪೊಲೀಸರನ್ನು ಪ್ರಶ್ನಿಸಿದರೆ, ನೀವೇ ಆರೋಪಿಯನ್ನು ಹುಡುಕಿಕೊಡಿ ಎಂದು ಉಡಾಫೆಯಿಂದ ಮಾತನಾಡುತ್ತಾರೆ ಎಂದು ದೂರಿದರು.
ತಲೆಮರೆಸಿಕೊಂಡಿರುವ ಆರೋಪಿ ಶ್ರೀಮಂತನನ್ನು ಬಂಧಿಸಬೇಕು. ನಿರ್ಲಕ್ಷ್ಯ ವಹಿಸಿರುವ ಯಸಳೂರು ಠಾಣೆ ಪಿಎಸ್ ಐ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಅಮಾನತು ಮಾಡಬೇಕು. ಇಲ್ಲದಿದ್ದರೆ ಸಂಘಟನೆ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಜ್ಯೋತಿ, ನೇತ್ರಾ, ರೇಣುಕಾ, ಸಂತ್ರಸ್ತೆ ಸುಶ್ಮಿತಾ ಹಾಗೂ ಶಶಿಕಲಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.