ADVERTISEMENT

ವನ್ಯಜೀವಿಗಳಿಗಳಿಗೆ ಉರುಳು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2020, 4:16 IST
Last Updated 2 ಸೆಪ್ಟೆಂಬರ್ 2020, 4:16 IST

ಹಾಸನ: ಬೆಳೆ ರಕ್ಷಣೆ, ಚರ್ಮ ಮಾರಾಟ, ಮಾಂಸ ಹಾಗೂ ಶೋಕಿಗಾಗಿ ವನ್ಯಜೀವಿಗಳನ್ನು ಬೇಟೆಯಾಡುವ ಜಾಲವೂ
ತೆರೆಮರೆಯಲ್ಲಿ ಕೆಲಸ ಮಾಡುತ್ತಲೇ ಇದೆ.

ಹೆಚ್ಚಾಗಿ ಕಾಡು ಹಂದಿ, ಕಾಡು ಕುರಿ ಹಾಗೂ ಮೊಲ ಶಿಕಾರಿಗಾಗಿಯೇ ಉರುಳು(ಬಲೆ) ಬಿಡಲಾಗುತ್ತಿದೆ. ವನ್ಯಜೀವಿಗಳ
ಬೇಟೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮಾರ್ಚ್‌ನಿಂದ ಆಗಸ್ಟ್‌ವರೆಗೆ ( ಹಾಸನ 1, ಸಕಲೇಶಪುರ 4, ಚನ್ನರಾಯಪಟ್ಟಣ 3, ಅರಸೀಕೆರೆ 4, ಅರಕಲಗೂಡು 1) 13 ಪ್ರಕರಣ ದಾಖಲಾಗಿದೆ.

ಜಿಲ್ಲೆಯ ವಿವಿಧ ಅರಣ್ಯ ಪ್ರದೇಶದಲ್ಲಿ ಕಾಡುಕೋಣ, ಕಾಡು ಹಂದಿ, ಮುಳ್ಳು ಹಂದಿ, ಜಿಂಕೆ ಹಾಗೂ ಕಾಡು ಪಕ್ಷಿಯನ್ನು
ಮಾಂಸಕ್ಕಾಗಿ ನಾಡ ಬಂದೂಕು ಬಳಸಿ ಬೇಟೆಯಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುವಾಗ ವಾಹನಗಳು ಡಿಕ್ಕಿ ಹೊಡೆದು ಎರಡು ಚಿರತೆ, ಜಿಂಕೆ ಹಾಗೂ ನವಿಲು ಮೃತಪಟ್ಟಿದ್ದರೆ, ಕಾಡು ಹಂದಿ, ಎರಡು ಚಿರತೆ ಉರುಳಿಗೆ ಸಿಲುಕಿ ಅಸುನೀಗಿವೆ.

ADVERTISEMENT

ಬೇಟೆಗಾರರು ಒಡ್ಡಿದ ಉರುಳಿಗೆ ಹಸಿವಿನಿಂದ ಆಹಾರ-ನೀರು ಹುಡುಕಿಕೊಂಡು ಒಂದು ಕಡೆಯಿಂದ ಮತ್ತೊಂದು ಕಡೆಗೆ
ಅಲೆಯುವ ಚಿರತೆ, ಕಾಡು ಹಂದಿ ಮೊದಲಾದ ಪ್ರಾಣಿಗಳು ಬಲಿಯಾಗುತ್ತಿದೆ.

‘ಬಹುತೇಕ ಕಡೆ ಕಾಡು ಹಂದಿ ಹಾಗೂ ಇತರೆ ಪ್ರಾಣಿಗಳನ್ನು ಬೇಟೆಯಾಡಲು ಉರುಳು ಹಾಕುವುದು ಹೆಚ್ಚಾಗಿದೆ. ಇದನ್ನೂ ಕಾಡುಪ್ರಾಣಿಗಳ ಬೇಟೆ ಎಂದೇ ಪರಿಗಣಿಸಲಾಗುವುದು. ಹಾಗಾಗಿ ಯಾರೂ ಉರುಳು ಹಾಕಿ ಶಿಕಾರಿ ಮಾಡಬಾರದು. ಅಂಥ ಪ್ರಕರಣ ಕಂಡು ಬಂದ ಕೂಡಲೇ ನಿಗದಿತ ದಂಡದ ಜೊತೆಗೆ ಮೂರು ವರ್ಷ ಕಾರಾಗೃಹ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು ತಿಳಿಸಿದರು.

‘ಕಾಡು ಕೋಣ, ಕುರಿಗಳ ಮಾಂಸ್ಕಾಗಿ ಸ್ಥಳೀಯರು ಹಾಗೂ ದಕ್ಷಿಣ ಕನ್ನಡದವರು ಬೇಟೆಯಾಡುತ್ತಿದ್ದಾರೆ.ಇವರ ಮೂಲ ಕಸುಬು ಕೃಷಿಯಾದರೂ ಹೆಚ್ಚಿನ ಹಣ ಸಂಪಾದನೆಗಾಗಿ ಕಾಡು ಪ್ರಾಣಿಗಳನ್ನು ಕೊಂದು ಅವುಗಳ ಮಾಂಸ
ಮಾರಾಟದಲ್ಲೂ ತೊಡಗಿಸಿಕೊಂಡಿದ್ದಾರೆ’ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.