ಶಿಗ್ಗಾವಿ: ‘ಗ್ರಾಮೀಣ ಮಕ್ಕಳಿಗೂ ಆಧುನಿಕ ತಂತ್ರಜ್ಞಾನ ಶಿಕ್ಷಣ ದೊರೆತು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಉದ್ದೇಶದಿಂದ ಪ್ರೊಜೆಕ್ಟರ್ ನೀಡಲಾಗಿದೆ’ ಎಂದು ಬೆಳಗಾವಿಯ ಎಲ್ವಿಪಿ ಕಾಲೇಜು ಸ್ನೇಹಿತರ ಸಂಘದ ಅಧ್ಯಕ್ಷ ಆದಿನಾಥ ವಸವಾಡೆ ಹೇಳಿದರು.
ತಾಲ್ಲೂಕಿನ ಗೊಟಗೋಡಿ ಉತ್ಸವ ರಾಕ್ ಗಾರ್ಡನ್ನಲ್ಲಿರುವ ಕನ್ನಡ ಜಾನಪದ ಶಿಕ್ಷಣ ಸಂಸ್ಥೆಯ ಉತ್ಸವ ಪೂರ್ವ ಪ್ರಾಥಮಿಕ ಇಂಗ್ಲಿಷ್ ಮಾಧ್ಯಮ ಶಾಲೆಗೆ ಭಾನುವಾರ ಬೆಳಗಾವಿ ಎಲ್ವಿಪಿ ಸ್ನೇಹಿತರ ಸಂಘದಿಂದ ಸ್ಮಾರ್ಟ್ ಕ್ಲಾಸ್ ಪ್ರೊಜೆಕ್ಟರ್ ಕೊಡುಗೆಯಾಗಿ ನೀಡುವ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಶಿಕ್ಷಣ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡುವುದನ್ನು ಮೈಗೂಡಿಸಿಕೊಂಡಿರುವ ಸಂಘ, ಪ್ರತಿ ವರ್ಷ 25 ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಳ್ಳುತ್ತಿದೆ. ಗ್ರಾಮೀಣ ಮಕ್ಕಳಿಗಾಗಿ ಈ ಹತ್ವಾಕಾಂಕ್ಷೆ ಯೋಜನೆ ಪ್ರಾರಂಭವಾಗಿರುವ ಹುಬ್ಬಳ್ಳಿ ದಾಸನೂರ ಸಮೂಹ ಸಂಸ್ಥೆ ಉತ್ಸವ ಶಾಲೆ ಕೆಲಸ ಅನುಕರಣೀಯ ಹಾಗೂ ಆದರ್ಶಪ್ರಾಯವಾಗಿದೆ’ ಎಂದು ಸಂಘದ ಮಾಜಿ ಅಧ್ಯಕ್ಷ ಸೋಮಶೇಖರ ಹೇಳಿದರು.
ಕನ್ನಡ ಜಾನಪದ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ವೇದಾರಾಣಿ ದಾಸನೂರ ಅವರಿಗೆ ಸಂಘದ ಪದಾಧಿಕಾರಿಗಳು 'ಸ್ಮಾರ್ಟ್ ಕ್ಲಾಸ್' ಹಸ್ತಾಂತರಿಸಿದರು.
ದಾಸನೂರ ಸಂಸ್ಥೆ ಆಡಳಿತ ನಿರ್ದೇಶಕ ಪ್ರಕಾಶ ದಾಸನೂರ, ಎಲ್ವಿಪಿ ಸ್ನೇಹಿತರ ಸಂಘದ ನಿರ್ದೇಶಕರಾದ ಶೀತಲಕುಮಾರ್, ಸುರೇಶ ಜಂಬುರೆ, ಶೇಷನಗೌಡ, ಎ.ಸಿ.ನಾಗರಾಜ, ಉಪಾಧ್ಯಕ್ಷ ಟಿ.ಎಸ್.ಚೌಗಲೆ, ಕಿರಣ ಪಾಟೀಲ, ಕಾರ್ಯದರ್ಶಿ ಬಸವರಾಜ ಹುಗ್ಗಿ, ಕೋಶಾಧಿಕಾರಿ ಸುನೀಲ ಸೌದತ್ತಿ ಇದ್ದರು. ದಿವ್ಯಾ ಸ್ವಾಗತಿಸಿದರು. ಜಯಶ್ರೀ ಸೊಲಬಕ್ಕನವರ ಆಭಾರ ಮನ್ನಣೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.