ADVERTISEMENT

‘ಎಲ್ಲರಿಗಾಗಿ ಬದುಕಿದವರೆ ಮಹಾಪುರುಷರು’

ರಾಣೆಬೆನ್ನೂರು, ಹಾವೇರಿಯಲ್ಲಿ ದೇವರದಾಸಿಮಯ್ಯ ಜಯಂತಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 11:01 IST
Last Updated 23 ಮಾರ್ಚ್ 2018, 11:01 IST

ರಾಣೆಬೆನ್ನೂರು: ‘ನಾವು ನಮಗಾಗಿ ಬದುಕು ಕಟ್ಟಿಕೊಳ್ಳುತ್ತೇವೆ. ಆದರೆ, ಶರಣರು, ವಚನಕಾರರು, ಮಹಾ ಪುರುಷರು ಪ್ರತಿಯೊಬ್ಬರ ಒಳಿತಿಗಾಗಿ ತಮ್ಮ ಜೀವನವನ್ನು ಮುಡಿ ಪಾಗಿಟ್ಟಿದ್ದಾರೆ’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಏಕನಾಥ ಬಾನುವಳ್ಳಿ ಹೇಳಿದರು.

ನಗರದ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ‘ದೇವರ ದಾಸಿಮಯ್ಯ ಅವರ 1038ನೇ ಜಯತಿ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವಚನಕಾರರ ಸಾಹಿತ್ಯ ಮಲೀನಗೊಂಡ ಮನುಷ್ಯರ ಮನಸ್ಸನ್ನು ಪರಿಶುದ್ಧಗೊಳಿಸುವ ದಿವ್ಯ ಗಂಗೆ’ ಎಂದರು.

ADVERTISEMENT

ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಗೌರವಾಧ್ಯಕ್ಷ ಡಾ. ಬಸವರಾಜ ಕೇಲಗಾರ, ನಗರಸಭಾ ಅಧ್ಯಕ್ಷೆ ಆಶಾ ಗುಂಡೇರ, ತಹಶೀಲ್ದಾರ್‌ ರಾಮಮೂರ್ತಿ ಹಾಗೂ ಬಿಎಜೆಎಸ್‌ಎಸ್‌ ಬಿಎಡ್‌ ಕಾಲೇಜಿನ ಎಂ.ಎಂ.ಮೃತ್ಯುಂಜಯ ಮಾತನಾಡಿದರು.

ಮೆರವಣಿಗೆ: ಸಕಲ ವಾದ್ಯಗಳೊಂದಿಗೆ ನಗರದ ನೀಲಕಂಠೇಶ್ವರ ದೇವಸ್ಥಾನ ದಿಂದ ದೇವರ ದಾಸೀಮಯ್ಯ ಅವರ ಭಾವಚಿತ್ರವನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಡಾ.ಕೆ.ಎಚ್.ಕದರಮಂಡಲಗಿ, ಶ್ರೀನಿವಾಸ ಕಾಕಿ, ಬಸವರಾಜ ಲಕ್ಷ್ಮೇಶ್ವರ, ಶ್ರೀನಿವಾಸ ಹಳ್ಳಳ್ಳಿ, ಸಂಕಪ್ಪ ಮಾರನಾಳ, ಶಂಕ್ರಣ್ಣ ನ್ಯಾಮತಿ, ಶಿವಾನಂದ ಸಾಲಗೇರಿ, ಹನುಮಂತಪ್ಪ ಮುಕ್ತೇನಹಳ್ಳಿ, ಚಂದ್ರಣ್ಣ ಆನ್ವೇರಿ, ನೀಲಕಂಠ ರೋಖಡೆ, ಯಲ್ಲಪ್ಪ ಗುತ್ತಲ, ಆರ್.ಕೆ.ಹುಬ್ಬಳ್ಳಿ, ಮನೋಹರ ಮಲ್ಲಾಡದ, ಅಶೋಕ ದುರ್ಗದಸೀಮಿ, ಡಾ.ಮಹಾಂತೇಶ ಎನ್‌., ಡಾ.ಬಸವರಾಜ ಡಿ.ಸಿ., ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ್ ಎನ್‌., ಶಿವಾನಂದ ಬಾಗಾದಿ ಇದ್ದರು.

ಹಾವೇರಿ:  ‘ಸಮಾಜ ಮತ್ತು ಧರ್ಮ ಗಳಲ್ಲಿ ಸಮಾನತೆ ತರುವ ಧ್ಯೇಯ ದೊಂದಿಗೆ ಜಾತಿ ಆಧಾರಿತ, ವರ್ಗೀಕೃತ ಸಮಾಜವನ್ನು ಪರಿವರ್ತಿಸಲು ದೇವರ ದಾಸಿಮಯ್ಯ ಅವಿರತವಾಗಿ ಶ್ರಮಿಸಿದ್ದರು’ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಡಿ.ದೇವರಾಜ ಅರಸು ಭವನದಲ್ಲಿ ಗುರುವಾರ ನಡೆದ ‘ದೇವರ ದಾಸಿಮಯ್ಯ ಜಯಂತಿ’ಯಲ್ಲಿ ಅವರು ಮಾತನಾಡಿದರು.

‘ವಚನಗಳ ಮೂಲಕ ಸಮಾಜದ ಜಾಗೃತಿಗೆ ಮುಂದಾದ ದೇವರ ದಾಸಿಮಯ್ಯ, ಮೇಲು–ಕೀಳು, ಬಡವ–ಶ್ರೀಮಂತ, ಸ್ತ್ರೀ–ಪುರುಷ ಎಂಬ ಭೇದ ಭಾವವನ್ನು ತೊಡೆದು ಹಾಕಲು ಶ್ರಮಿಸಿದ್ದರು’ ಎಂದರು.

ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಂಶೋಧಕ ಡಾ.ಜಗನ್ನಾಥ ಆರ್.ಗೇನಣ್ಣನವರ ಮಾತನಾಡಿ, ದೇವರ ದಾಸಿಮಯ್ಯ ಧಾರ್ಮಿಕ ಆಂದೋಲನದ ಮೂಲಕ ಸಾಮಾಜಿಕ ಶೋಷಣೆಗೆ ಮುಕ್ತಿ ನೀಡಲು ಶ್ರಮಿಸಿದ್ದರು. ಅವರು ರಚಿಸಿದ ವಚನಗಳು ಜನರಿಗೆ ಪ್ರೇರಣೆಯ ಜೊತೆಗೆ ಕನ್ನಡ ಸಾಹಿತ್ಯಕ್ಕೆ ವಿಶೇಷ ಕೊಡುಗೆಯನ್ನು ನೀಡಿವೆ ಎಂದರು.

ದೇವಾಂಗ ಸಮಾಜದ ಅಧ್ಯಕ್ಷ ಕೆ.ಬಿ.ಕುದರಿ, ನಗರಸಭೆ ಅಧ್ಯಕ್ಷೆ ಪಾರ್ವತೆಮ್ಮ ಹಲಗಣ್ಣನವರ, ಮುಖಂಡರಾದ ಡಿ.ಆರ್.ಕುದರಿ, ಉಪ ತಹಶೀಲ್ದಾರ್ ಕುಂಬಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ನಾಗರಾಜ, ಕುಮಾರದಾಸ ಹೂಗಾರ, ಪಿ.ಜಿ.ನೆಲೋಗಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.