ADVERTISEMENT

ಏಕರೂಪ ತೆರಿಗೆ; ರಾಜ್ಯದತ್ತ ವಿಶ್ವದ ಗಮನ

ಕಾರ್ಯಾಗಾರದಲ್ಲಿ ಜಿಎಸ್‌ಟಿ ಸಮಿತಿ ಅಧ್ಯಕ್ಷ ಬಿ.ಟಿ.ಮನೋಹರ್ ಮಾತನಾಡಿದರು

​ಪ್ರಜಾವಾಣಿ ವಾರ್ತೆ
Published 3 ಜೂನ್ 2017, 8:38 IST
Last Updated 3 ಜೂನ್ 2017, 8:38 IST
ಕಾರ್ಯಾಗಾರದಲ್ಲಿ ಜಿಎಸ್‌ಟಿ ಸಮಿತಿ ಅಧ್ಯಕ್ಷ ಬಿ.ಟಿ.ಮನೋಹರ್ ಮಾತನಾಡಿದರು
ಕಾರ್ಯಾಗಾರದಲ್ಲಿ ಜಿಎಸ್‌ಟಿ ಸಮಿತಿ ಅಧ್ಯಕ್ಷ ಬಿ.ಟಿ.ಮನೋಹರ್ ಮಾತನಾಡಿದರು   

ಹಾಸನ: ‘ಜುಲೈ 1ರಿಂದ ರಾಷ್ಟ್ರವ್ಯಾಪಿ ಜಾರಿಗೆ ಬರುವ ‘ಒಂದು ದೇಶ- ಒಂದು ತೆರಿಗೆ’ (ಜಿಎಸ್‌ಟಿ) ಕಾಯ್ದೆಗೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇಡೀ ವಿಶ್ವವೇ ಕರ್ನಾಟಕದತ್ತ ತಿರುಗಿ ನೋಡುತ್ತಿದೆ’ ಎಂದು ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಬಿ.ವಿ.ಮುರುಳಿಕೃಷ್ಣ ತಿಳಿಸಿದರು.

ವಾಣಿಜ್ಯ ತೆರಿಗೆ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯಿಂದ ನಗರದ ಶುಭೋದಯ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಎಸ್‌ಟಿ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

ರಾಜ್ಯದ ಶೇ 94ರಷ್ಟು ಜನರು ಜಿಎಸ್‌ಟಿ ಪದ್ಧತಿ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ ಉಳಿದ 29 ರಾಜ್ಯಗಳಲ್ಲಿ ಜುಲೈ 1ರಿಂದ ಜಿಎಸ್‌ಟಿ ಜಾರಿಗೆ ಬರಲಿದೆ. ಸಾರ್ವಜನಿಕ ವಲಯದಲ್ಲಿ ಕಾಯ್ದೆ ಜಾರಿ ಕುರಿತು ಸಾಕಷ್ಟು ಗೊಂದಲಗಳು ಹುಟ್ಟಿ ಕೊಂಡಿವೆ. ಈ ಕಾಯ್ದೆ ಜಾರಿಯಿಂದ ಉದ್ಯಮಿಗಳು ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಮಾಹಿತಿ ನೀಡಿದರು.

ADVERTISEMENT

ತೆರಿಗೆ ಪಾವತಿಸುವ ವಿಧಾನದಲ್ಲಿ ಇಷ್ಟು ದಿನಗಳಿಂದ ಅನುಸರಿಸಿಕೊಂಡು ಬರುತ್ತಿರುವ ಮಾದರಿಯನ್ನೇ ನೂತನ ತೆರಿಗೆ ಪದ್ಧತಿಯಲ್ಲೂ ಮುಂದುವರಿಸಲಾ ಗಿದೆ. ಆದರೆ, ಕಾಯ್ದೆಯಲ್ಲಿ ಸಂಪೂರ್ಣ ತಂತ್ರಜ್ಞಾನಕ್ಕೆ ಒತ್ತು ನೀಡಲಾಗಿದೆ. ಜಿಎಸ್‌ಟಿ ಗ್ರಾಹಕರು ಮತ್ತು ವರ್ತಕರ ಮೇಲೆ ಆರ್ಥಿಕ ಹೊರೆ ಹೇರುತ್ತಿಲ್ಲ. ಹೊಸ ವ್ಯವಸ್ಥೆಗೆ ಹೊಂದಿ ಕೊಳ್ಳುವ ಮೊದಲು ಸ್ವಲ್ಪ ಕಷ್ಟವಾಗು ತ್ತದೆ ಸಹಜ ಎಂದು ಕಿವಿಮಾತು ಹೇಳಿದರು.

ಈ ಹಿಂದೆ ಕೇಂದ್ರ ಸರ್ಕಾರಕ್ಕೆ 4 ಹಾಗೂ ರಾಜ್ಯ ಸರ್ಕಾರಕ್ಕೆ 8 ವಿವಿಧ ರೂಪದ ತೆರಿಗೆ ಪಾವತಿಸಲಾಗುತ್ತಿತ್ತು. ಇದರಿಂದ ಗ್ರಾಹಕ ಮತ್ತು ವ್ಯಪಾರಿಗೆ ಹೊಡೆತ ಬೀಳುತ್ತಿತ್ತು. ಆದರೆ, ಜಿಎಸ್‌ಟಿಯಿಂದ ದೇಶದ ಸಾಮಾನ್ಯನೂ ‘ಒಂದು ದೇಶ– ಒಂದು ತೆರಿಗೆ’ ವ್ಯಾಪ್ತಿಗೆ ಒಳಪಡುತ್ತಾನೆ ಎಂದು ವಿವರಿಸಿದರು.

ಶಿವಮೊಗ್ಗ ವಿಭಾಗದ ಜಂಟಿ ಆಯುಕ್ತ ಚಲುವೇಗೌಡ ಮಾತನಾಡಿ, 1993ರಿಂದ ತೆರಿಗೆ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆದವು. 2009ರಲ್ಲಿ ಲೋಕಸಭೆಯಲ್ಲಿ ಚರ್ಚಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಯಿತು. 2014ರಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ನೂತನ ತೆರಿಗೆ ವಿಧಾನ ಜಾರಿಗೊಳಿಸಲಾ ಯಿತು. 2017ರ ಜುಲೈ 1ರಿಂದ ತೆರಿಗೆ ಪದ್ಧತಿ ಸಂಪೂರ್ಣವಾಗಿ ಬದಲಾಗಲಿದೆ ಎಂದು ಹೇಳಿದರು.

ಮಲೆನಾಡು ಭಾಗದಲ್ಲಿ 38 ಸಾವಿರ ಉದ್ಯಮಿಗಳಿದ್ದು, ಇದುವರೆಗೆ 5,886 ಜನರು ಮಾತ್ರ ಜಿಎಸ್‌ಟಿ  ಪದ್ಧತಿಗೆ ಪರವಾನಗಿ ಪಡೆದಿದ್ದಾರೆ. ಈ ಕಾನೂನು ಜಾರಿಗೆ ಕೆಲವೇ ದಿನ ಬಾಕಿ ಇದ್ದು, ಶೀಘ್ರದಲ್ಲಿ ಆನ್‌ಲೈನ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಎಸ್‌ಟಿ ಸಮಿತಿ ಅಧ್ಯಕ್ಷ ಬಿ.ಟಿ. ಮನೋಹರ್ ಮಾತನಾಡಿ, ಕಾಲಕ್ಕೆ ಅನುಗುಣವಾಗಿ ಬದಲಾಗದಿ ದ್ದರೆ ಕಠಿಣ ಪರಿಸ್ಥಿತಿ ಎದುರಿಸಬೇಕಾಗು ತ್ತದೆ. ಅದೇ ರೀತಿ ಜಿಎಸ್‌ಟಿ ಅನ್ವಯವಾ ಗುತ್ತಿದ್ದು, ನೋಂದಣಿಯಾಗದವರು ಶೀಘ್ರ ಕಾರ್ಯ ಪ್ರವೃತ್ತರಾಗಬೇಕು ಎಂದರು.

ವಾಣಿಜ್ಯ ತೆರಿಗೆ ಆಯುಕ್ತ ಬಸವರಾಜ್, ತುಳಸೀದಾಸ್ ಮಾತನಾ ಡಿದರು. ಜಿಎಸ್‌ಟಿ ಕುರಿತು ಉದ್ಯಮಿಗಳ ಜತೆ ತಜ್ಞರು ಸಂವಾದ ನಡೆಸಿದರು. ಜಿಲ್ಲಾ ವಾಣಿಜ್ಯ, ಕೈಗಾರಿಕಾ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಇದ್ದರು.

**

ಎಲ್ಲ ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಡಿಜಿಟಲೀಕರಣಕ್ಕೆ ಆದ್ಯತೆ ನೀಡಿದೆ
-ಬಿ.ಟಿ.ಮನೋಹರ್, ಜಿಎಸ್‌ಟಿ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.