ADVERTISEMENT

ಒಗ್ಗಟ್ಟಿನಿಂದ ಸದೃಢ ಸಮಾಜ ಸಾಧ್ಯ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 6:45 IST
Last Updated 18 ಫೆಬ್ರುವರಿ 2012, 6:45 IST

ಹಾನಗಲ್: `ಸಮಾಜ ಬಾಂಧವರು ಒಗ್ಗಟ್ಟಿನಿಂದ ಕಾರ್ಯಪ್ರವೃತ್ತರಾದಾಗ ಸಮಾಜ ಸದೃಢವಾಗುವುದು. ನೀವು ಬದುಕಿ ಇತರರನ್ನೂ ಬದುಕಲು ಬಿಟ್ಟಾಗ ಸುಂದರ ಬದುಕು ನಿರ್ಮಾಣವಾಗುತ್ತದೆ~ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ನುಡಿದರು.

ಇಲ್ಲಿನ ಕುರುಬಗೇರಿಯಲ್ಲಿ (ಶಿವಾಜಿನಗರ) ನೂತನವಾಗಿ ನಿರ್ಮಾಣಗೊಂಡ ಛತ್ರಪತಿ ಶಿವಾಜಿ ಮರಾಠ ಸಭಾಭವನದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಶಿವಾಜಿ ತತ್ವ ಆದರ್ಶಗಳನ್ನು ಪರಿಪಾಲಿಸಿಕೊಂಡು ಬಂದಿರುವ ಮರಾಠ ಸಮಾಜದಿಂದ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯಲಿ ಹಾರೈಸಿದರು.

ಬೆಂಗಳೂರು ಗೋಸಾಯಿಮಠದ ಸುರೇಶ್ವರಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಸಮಾಜದ ಸಂಘಟನೆಯಲ್ಲಿ ಒಗ್ಗಟ್ಟು ಮುಖ್ಯ. ಮುಂದಿನ ದಿನಗಳಲ್ಲಿ ಸಮಾಜದ ಯುವಶಕ್ತಿಗೆ ಹಿರಿಯರು ಮಾರ್ಗದರ್ಶನ ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸುವಂತೆ ಕರೆ ನೀಡಿದರು.

ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಭೋಜರಾಜ ಕರೂದಿ, ವಿಧಾನಸಭೆಯ ಮಾಜಿ ಉಪಸಭಾಪತಿ ಮನೋಹರ ತಹಶೀಲ್ದಾರ, ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ.ಎಸ್.ಬಳ್ಳಾರಿ, ಉಪಾಧ್ಯಕ್ಷ ಪಿ.ವೈ.ಗುಡಗುಡಿ, ಪುರಸಭೆ ಮಾಜಿ ಅಧ್ಯಕ್ಷ ರಾದ ಎಂ.ಬಿ.ಕಲಾಲ, ಕಲ್ಯಾಣಕುಮಾರ ಶೆಟ್ಟರ ಮಾತನಾಡಿದರು.


ಛತ್ರಪತಿ ಶಿವಾಜಿ ಮರಾಠ ಸಭಾಭವನ ಸಮೀತಿ ಅಧ್ಯಕ್ಷ ಪರಶುರಾಮ ಶಿಂಧೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಯಲ್ಲಪ್ಪ ಕಿತ್ತೂರ, ಎ.ಪಿ.ಎಂ.ಸಿ ಅಧ್ಯಕ್ಷ ಬಿ.ಎಸ್.ಅಕ್ಕಿವಳ್ಳಿ, ಪುರಸಭೆ ಅಧ್ಯಕ್ಷೆ ಹಸೀನಾಬಿ ನಾಯ್ಕನವರ, ಪುರಸಭೆ ಸದಸ್ಯೆ ಲಕ್ಷ್ಮೀಬಾಯಿ ಕಿತ್ತೂರ, ಗಣ್ಯರಾದ ವಿನಾಯಕ ಪವಾರ, ಸತೀಶ ದೇಶಪಾಂಡೆ, ಚನ್ನವೀರಪ್ಪ ಉದಾಸಿ, ಗುರುಶಿದ್ದಪ್ಪ ಕೊಂಡೋಜಿ, ಗಣೇಶಪ್ಪ ಕೋಡಿಹಳ್ಳಿ, ವಿಷ್ಣುಕಾಂತ ಜಾಧವ ಮೊದಲಾದವರು ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಶ್ರುತಿ ಕೋಡದ ಮತ್ತು ಲಕ್ಷ್ಮೀ ಚವ್ಹಾಣ ಪ್ರಾರ್ಥಿಸಿದರು, ವಕೀಲ ರಾಜು ಗೌಳಿ ಸ್ವಾಗತಿಸಿದರು. ವಿ.ಬಿ.ಪವಾರ ಕಾರ್ಯಕ್ರಮ ನಿರೂಪಿಸಿದರು. ರಾಮಣ್ಣ ಮಾಸನಕಟ್ಟಿ ವಂದಿಸಿದರು. ಇದೇ ಸಂದರ್ಭದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಹಾಯ ಮಾಡಿದ  150ಕ್ಕೂ ಅಧಿಕ ಸಮಾಜ ಸದಸ್ಯರನ್ನು  ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT