ADVERTISEMENT

ಓದು, ನೃತ್ಯ, ಕಲೆ, ಸಾಹಿತ್ಯದಲ್ಲಿ ಬೆಳಗಿದ ದೀಪಾ

ಪ್ರಜಾವಾಣಿ ವಿಶೇಷ
Published 6 ಜೂನ್ 2011, 6:10 IST
Last Updated 6 ಜೂನ್ 2011, 6:10 IST

ಹಾವೇರಿ: ಪ್ರತಿಯೊಬ್ಬ ಮನುಷ್ಯರಲ್ಲಿ ಪ್ರತಿಭೆ ಇರುತ್ತದೆ. ಒಂದಿಲ್ಲ ಒಂದು ಕ್ಷೇತ್ರದಲ್ಲಿ ತನ್ನದೇ ಆದ ಆಸಕ್ತಿ ಸಹ ಹೊಂದಿರುತ್ತಾರೆ. ಅವರಲ್ಲಿನ ಆಸಕ್ತಿ ಕ್ಷೇತ್ರವನ್ನು ಗುರುತಿಸಿ ಸೂಕ್ತ ಪ್ರೋತ್ಸಾಹ, ಮಾರ್ಗದರ್ಶನ ನೀಡಿದಾಗ ಆ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುತ್ತಾರೆ.

ಹೀಗೆ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭಾವಂತರು ನಮ್ಮ ಮಧ್ಯ ಸಾಕಷ್ಟು ಜನರಿದ್ದಾರೆ. ಆದರೆ, ಹಲವು ಕ್ಷೇತ್ರಗಳಲ್ಲಿ ಆಸಕ್ತಿಯನ್ನಿಟ್ಟುಕೊಂಡು ಸಾಧನೆ ಮಾಡಿದವರು ಮಾತ್ರ ಬಹಳ ಕಡಿಮೆ.
ಹಾವೇರಿಯ ಬಾಲೆಯೊಬ್ಬಳು ಇಂತಹ ವಿರಳ ಸಾಧಕರಲ್ಲಿ ಒಬ್ಬಳಾಗಿ ಹೊರಹೊಮ್ಮಿದ್ದಾಳೆ.

ಆಕೆಯ ಹೆಸರು ದೀಪಾ ವಿ. ಕಿತ್ತೂರಮಠ. ಈಚೆಗಷ್ಟೇ ಪ್ರಕಟವಾದ ಸಿಬಿಎಸ್‌ಸಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಅ1 ಗ್ರೇಡ್ (ಶೇ 93 ರಷ್ಟು ಅಂಕ) ಪಡೆದು ಕೆಎಲ್‌ಇ ಆಂಗ್ಲ ಮಾಧ್ಯಮ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ.

ಶಾಲೆಗೆ ಪ್ರಥಮ ಸ್ಥಾನ ಬಂದ ವಿದ್ಯಾರ್ಥಿನಿ ಎಂದರೆ, ಅವಳು ಕೇವಲ ಓದಿನಲ್ಲಿ ಮಾತ್ರ ಮುಂದು ಎಂಬ ಸಾಮಾನ್ಯ ತಿಳಿವಳಿಕೆ ಮೂಡಲಿದೆ. ಆದರೆ, ಈ ವಿದ್ಯಾರ್ಥಿನಿ ಕೇವಲ ಪುಸ್ತಕದ ಹುಳುವಾಗದೇ ಓದಿನೊಂದಿಗೆ ನೃತ್ಯಗಾತಿ, ಭಾಷಣಗಾರ್ತಿ, ಕಲಾವಿದೆ, ಬಾಲ ವಿಜ್ಞಾನಿ, ಕವಯತ್ರಿಯಾಗಿ ಯಶಸ್ಸು ಸಾಧಿಸಿದ್ದಾಳೆ.

16 ವಯಸ್ಸಿನ ದೀಪಾ ಬಾಲ್ಯ ದಿಂದಲೂ ಪ್ರತಿಭಾವಂತೆ, ಸಣ್ಣವಳಿದ್ದಾಗಲೇ ಮಗಳ ಪ್ರತಿಭೆ ಯನ್ನು ಗುರುತಿಸಿದ ಶಿಕ್ಷಕ ವೃತ್ತಿಯ ತಂದೆ, ಗೃಹಣಿಯಾದ ತಾಯಿ, ಆಕೆಗೆ ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿದ್ದಾರೆ. ಅವರ ನಂಬಿಕೆ ಹುಸಿಗೊಳಿಸದೇ ಎಲ್‌ಕೆಜಿಯಿಂದ ಎಸ್ಸೆಸ್ಸೆಲ್ಸಿವರೆಗೆ ಶಾಲೆಯಲ್ಲಿ ಪ್ರಥಮ ಸ್ಥಾನವನ್ನು ಯಾರಿಗೂ ಬಿಟ್ಟುಕೊಡದ ಜಟ್ಟಿಯಾಗಿದ್ದಾಳೆ.

ಅಷ್ಟೇ ಅಲ್ಲದೇ ಶಾಲೆಯಲ್ಲಿ ನಡೆಯುವ ಭಾಷಣ, ವೇಷಭೂಷಣ, ಚರ್ಚೆ, ವಿಜ್ಞಾನ ವಸ್ತು ಪ್ರದರ್ಶನ ಹೀಗೆ ಹತ್ತು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಬಾಚಿಕೊಂಡಿ ದ್ದಲ್ಲದೇ, ಕನ್ನಡ ಸಾಹಿತ್ಯ ಪರಿಷತ್ ನಡೆಸುವ ಕವಿಗೋಷ್ಠಿಯಲ್ಲಿ ಭಾಗ ವಹಿಸಿ ಪ್ರಶಸ್ತಿ ಪಡೆದಿದ್ದಾಳೆ. ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಜಿಲ್ಲಾ ಮತ್ತು ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸಾವಯವ ಕೃಷಿ ಕುರಿತು ತಯಾರಿಸಿದ ಪ್ರೊಜೆಕ್ಟ್‌ಗೆ ಪ್ರಥಮ ಬಹುಮಾನ ಪಡೆದಿದ್ದಾಳೆ.

ರಾಯಚೂರಿನಲ್ಲಿ ನಡೆದ 17ನೇ ರಾಜ್ಯಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಹಾಗೂ ಮೈಸೂರಿನಲ್ಲಿ ನಡೆದ ಇಂತಹದೇ ಸಮಾವೇಶ ಸೇರಿದಂತೆ ಇನ್ನಿತರ ಕಡೆಗಳಲ್ಲಿ ನಡೆದ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾಳೆ.

ಐಎಎಸ್ ಕನಸು: ಬಹುಮುಖ ಪ್ರತಿಭೆಯಾಗಿರುವ ದೀಪಾ, `ವಿಜ್ಞಾನ ದಲ್ಲಿ ಪಿಯುಸಿ ಮುಗಿಸಿ ಐಎಎಸ್ ಮಾಡುವ ಕನಸು ಹೊಂದಿದ್ದೇನೆ~ ಎನ್ನುತ್ತಾಳೆ.

`ಮುಂದಿನ ದಿನಗಳಲ್ಲಿ ಸಹ ಕೇವಲ ಓದುವುದಕ್ಕಷ್ಟೇ ಸಮಯ ಮೀಸಲಿಡದೇ ಪೇಂಟಿಂಗ್, ಸಾಹಿತ್ಯ, ಡಾನ್ಸ್‌ಗೂ ಸಮಯ ವಿನಿಯೋಗ ಮಾಡಿ ಆ ಕ್ಷೇತ್ರಗಳಲ್ಲಿ ಸಹ ಏನನ್ನಾದರೂ ಮಾಡಬೇಕೆಂಬ ಮಹದಾಸೆಯಿದೆ~ ಎಂದು ತನ್ನ ಕನಸನ್ನು ವಿವರಿಸುವ ದೀಪಾ, `ದಿನಪೂರ್ತಿ ಪುಸ್ತಕ ಹಿಡಿದು ಕುಳಿತುಕೊಳ್ಳದೇ, ಓದಲು ಸ್ವಲ್ಪ ಸಮಯ ತೆಗೆದಿಟ್ಟು ಅದೇ ಸಮಯ ದಲ್ಲಿ ಓದುವ ಹವ್ಯಾಸ ಬೆಳೆಸಿಕೊಂಡಿರು ವುದೇ ಉತ್ತಮ ಫಲಿತಾಂಶ ಬರಲು ಕಾರಣ~ ಎಂದು ಅವಳು ಹೇಳುತ್ತಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.