ADVERTISEMENT

ಕಣ್ಣುಗಳ ಸಂರಕ್ಷಣೆಗೆ ಒತ್ತುಕೊಡಿ: ಡಾ. ಉಮೇಶ

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 8:25 IST
Last Updated 3 ಜನವರಿ 2014, 8:25 IST

ಹಾವೇರಿ: ಕಣ್ಣುಗಳು ಮಾನವನಿಗೆ ದೇವರು ಕೊಟ್ಟ ಉಡುಗರೆ. ಅವುಗಳ ಬಗ್ಗೆ ನಿರ್ಲಕ್ಷ ಭಾವನೆ ತಾಳದೆ, ಪ್ರತಿಯೊಬ್ಬರು ಕಣ್ಣುಗಳ ಸಂರಕ್ಷಣೆಗೆ ಒತ್ತುಕೊಡಬೇಕು ಎಂದು ನೇತ್ರ ತಜ್ಞ ಡಾ.ಉಮೇಶ ಹಿರೇಮಠ ಜನರಿಗೆ ಸಲಹೆ ಮಾಡಿದರು. ತಾಲ್ಲೂಕಿನ ದೇವಗಿರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಲಯನ್ಸ್‌ ಕ್ಲಬ್‌ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ಪೊರೆ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ರೋಗಿಗಳನ್ನು ತಪಾಸಣೆ ನಡೆಸಿ ಅವರು ಮಾತನಾಡಿದರು.

ದಾನದಲ್ಲಿಯೇ ಅತ್ಯಂತ ಶ್ರೇಷ್ಠ ದಾನ ನೇತ್ರದಾನ. ಮನುಷ್ಯರು ಮರಣದ ನಂತರ ಕಣ್ಣುಗಳನ್ನು ದಾನ ಮಾಡುವುದರಿಂದ ದೃಷ್ಠಿಯಿಲ್ಲದ ಇನ್ನೊಂದು ಜೀವಕ್ಕೆ ಜಗತ್ತಿ ಸೌಂದರ್ಯ ಸವಿಯುವ ಭಾಗ್ಯ ಕಲ್ಪಿಸಿದಂತಾಗುತ್ತದೆ ಎಂದರು. ಅಲ್ಲದೇ, ನೇತ್ರದಾನ ಮಾಡಿದ ವ್ಯಕ್ತಿಯ ಮರಣ ಹೊಂದಿದ ನಂತರವೂ ಆತನ ಕಣ್ಣುಗಳನ್ನು ಮತ್ತೊಂದು ಜೀವಕ್ಕೆ ಜೋಡಿಸುವ ಮೂಲಕ ಸತ್ತ ವ್ಯಕ್ತಿಯನ್ನು ಜೀವಂತವಾಗಿರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಲಯನ್ಸ್‌ ಕ್ಲಬ್‌ ಅಧ್ಯಕ್ಷ ಎಸ್‌.ಎಸ್‌.ಕಬ್ಬೂರ, ಕಾರ್ಯದರ್ಶಿ ಆರ್‌.ಆರ್‌.­ಪಾಟೀಲ, ಖಜಾಂಚಿ ಎಂ.ಎಸ್‌.­ಮಡ್ಲೇರಿ, ಲಯನ್ಸ್‌ ಕ್ಲಬ್‌ ಪದಾಧಿಕಾರಿಗಳು, ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಶಿಬಿರದಲ್ಲಿ ಪಾಲ್ಗೊಂಡಿದ್ದ ದೇವಗಿರಿ ಸುತ್ತಮುತ್ತಲಿನ ಗ್ರಾಮಗಳ ಸುಮಾರು ನೂರಕ್ಕೂ ಹೆಚ್ಚಿನ ಜನರ ಕಣ್ಣುಗಳನ್ನು ತಪಾಸಣೆ ಮಾಡ­ಲಾಯಿತು. ಅಲ್ಲದೇ, ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದ 52 ಜನರಲ್ಲಿ ಮೊದಲ ಹಂತವಾಗಿ 30 ಜನರಿಗೆ ಹಾವೇರಿಯ ರೇಣುಕಾ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತವಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಲಾಯಿತು.

ಹುದ್ದೆ ಭರ್ತಿ: ನಿರ್ಧಾರ ಆಹ್ವಾನ
ಬ್ಯಾಡಗಿ:
ರಾಜ್ಯದ ಅನುದಾನಿತ ಪದವಿ ಪೂರ್ವ ಕಾಲೇ­ಜುಗಳಲ್ಲಿ ನಿವೃತ್ತಿ, ನಿಧನ, ರಾಜೀನಾಮೆ ಮತ್ತು ಬಡ್ತಿ ಮೂಲಕ ತೆರವಾದ  ೨೯೧ ಹುದ್ದೆಗಳನ್ನು ತುಂಬ­­ಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿರುವುದಕ್ಕೆ  ಪದವಿ ಪೂರ್ವ ನೌಕರರ ಸಂಘದ ರಾಜ್ಯ ಘಟಕದ ಗೌರವಾಧ್ಯಕ್ಷ ಎಸ್.ವಿ.­ಸಂಕ­ನೂರ ಸ್ವಾಗತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.