ADVERTISEMENT

ಕಲೆ ಸಿದ್ಧಿಸಲು ನಿರಂತರ ಅಭ್ಯಾಸ ಅಗತ್ಯ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 8:40 IST
Last Updated 8 ಫೆಬ್ರುವರಿ 2012, 8:40 IST

ಹಾನಗಲ್: `ಲಾಭದ ಲೆಕ್ಕಾಚಾರಗಳಿಲ್ಲದೆ ಮಕ್ಕಳಲ್ಲಿನ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ ಕಲಾ ಶಾಲೆಗಳ ತ್ಯಾಗ ಬಹುದೊಡ್ಡದು. ಕಲೆಯನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿಸಬೇಕು. ನಿರಂತರ ಅಭ್ಯಾಸದಿಂದ ಮಾತ್ರ ಕಲೆ ಕರಗತವಾಗಲು ಸಾಧ್ಯ~ ಎಂದು  ಶಿರಶಿಯ ಖ್ಯಾತ ನೃತ್ಯ ವಿದುಷಿ ಸೀಮಾ ಭಾಗವತ್ ನುಡಿದರು.

ಹಾನಗಲ್ಲಿನಲ್ಲಿ ಈಚೆಗೆ ನಡೆದ `ಹೆಜ್ಜೆ-ಗೆಜ್ಜೆ~ ನೃತ್ಯ ಕಲಾವೇದಿಕೆಯ 7 ನೇ  ವಾರ್ಷಿಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

 ಕಲೆಯನ್ನು ಬೆಳೆಸಲು ಸಂಘಟಕರ ಪರದಾಟವನ್ನು ಪಾಲಕರು ಅರಿಯಬೇಕು. ಕಲೆಗೆ ಶಾಸ್ತ್ರೀಯ ಅಭ್ಯಾಸದ ಅವಶ್ಯಕತೆಯಿದ್ದು, ಮುಂಬರುವ ದಿನಗಳಲ್ಲಿ  ಕಲಾಸಕ್ತಿ ಬಹುಮುಖವಾಗುವುದಲ್ಲದೆ ಪ್ರತಿಭಾ ಅಭಿವ್ಯಕ್ತಿಗೆ ಬಹು ಬೆಲೆ ಬರಲಿದೆ ಎಂದರು.     

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಥಳಿಯ ಆದಿಶಕ್ತಿ ಸೌಹಾರ್ದ ಸಹಕಾರಿ ಬ್ಯಾಂಕ ಅಧ್ಯಕ್ಷ ಎಂ.ಬಿ.ಕಲಾಲ, ಒಂದು ನೃತ್ಯ ಶಾಲೆಯನ್ನು ಆರಂಭಿಸುವ ಮೂಲಕ ಹಾನಗಲ್ ಭಾಗದ ಪ್ರತಿಭಾವಂತರಿಗೆ ನೃತ್ಯ ಕಲಿಕೆಗೆ ಅವಕಾಶ ನೀಡಿದ ಹೆಜ್ಜೆ-ಗೆಜ್ಜೆ ನೃತ್ಯ ಕಲಾ ವೇದಿಕೆ ನಿಜಕ್ಕೂ ಅಭಿನಂದನಾರ್ಹ. ಅವಕಾಶಗಳಿಲ್ಲದೆ ಹಲವು ಪ್ರತಿಭೆಗಳು ಬೆಳಕಿಗೆ ಬಾರದೇ ಹೋಗುತ್ತವೆ. ಒಳ್ಳೆಯ ಕೆಲಸಗಳನ್ನು ಬೆಂಬಲಿಸಿ ಪ್ರೋತ್ಸಾಹಿಸಿದಾಗ ಮಾತ್ರ ಸಾಮಾಜಿಕ ಉನ್ನತಿ ಸಾಧ್ಯ ಎಂದರು. ಪುರಸಭಾ ಮಾಜಿ ಅಧ್ಯಕ್ಷ ಯಲ್ಲಪ್ಪ ಕಿತ್ತೂರ,  ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿ ಶಿಡ್ಲಾಪುರ ಮಾತನಾಡಿದರು.

ನಂತರ ನಡೆದ ನೃತ್ಯ ಪ್ರದರ್ಶನದಲ್ಲಿ  ಸೀಮಾ ಭಾಗವತ್ ಅವರ ಹಾಡುಗಾರಿಕೆ, ಪ್ರದೀಪ ಶಿರಶಿ ಅವರ ಮೃದಂಗ, ಶ್ವೇತಾ ಬಿಳಗೀಕರ ಅವರ ನಟುವಾಂಗ, ಸುರೇಶ ಮೈಸೂರ ಅವರ ವಾಯಲಿನ್ ಗಮನ ಸೆಳೆಯಿತು.
 
ರೀನಾ ಕಾಟೇಕರ, ಗುತ್ತೆಮ್ಮ ಜೋಗೇರ, ಸಂಗೀತಾ ದೇಸಾಯಿ,  ವಿಜಯಲಕ್ಷ್ಮೀ ಬೆಲ್ಲದ, ಭಾಗ್ಯಶ್ರೀ ದೇಶಪಾಂಡೆ, ಅಪೂರ್ವ ಕಲಾಲ, ಅಮೃತಾ ಸುಂಗಂಧಿ, ಜಯಂತಿ ನಾಡಿಗೇರ, ವರುಣಾ ಜವಳಿ, ರಮ್ಯಾ ತಳವಾರ,  ಮಹಿಮಾ ಆರ್, ಹರ್ಷಿತಾ ಹೊಸಮನಿ, ಸುಮಂತ ಲಿಂಗೇರಿ,  ಸುರಕ್ಷಾ ಸೋಮಸಾಗರ, ಪ್ರೀತಿ ದಾನಪ್ಪನವರ, ಅರ್ಪಿತಾ ಪಡೆಪ್ಪನವರ ಸೇರಿದಂತೆ ನೂರಕ್ಕೂ ಅಧಿಕ ವಿದ್ಯಾರ್ಥಿ ಕಲಾವಿದರ ನೃತ್ಯ ಪ್ರದರ್ಶನ ಆಕರ್ಷಕವಾಗಿತ್ತು.

ಸಂಪದ ಪೂಜಾರ, ಸ್ಫೂರ್ತಿ ಜೋಷಿ ಪ್ರಾರ್ಥನೆ ಹಾಡಿದರು. ಸಂಸ್ಥೆಯ ಅಧ್ಯಕ್ಷ ಕೃಷ್ಣ ಲಿಂಗೇರಿ ಪ್ರಾಸ್ತಾವಿಕ ಮಾತನಾಡಿದರು. ವೆಂಕಟೇಶ ಚಲವಾದಿ ಸ್ವಾಗತಿಸಿದರು. ಸನತ್ ಲಿಂಗೇರಿ ಕಾರ್ಯಕ್ರಮ ನಿರೂಪಿಸಿದರು. ಕಾಟೇಕರ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.