ADVERTISEMENT

ಕವಿಗೋಷ್ಠಿ: ರಾಜಕಾರಣಿಗಳಿಗೆ ಚಾಟಿ ಏಟು ಕೊಟ್ಟ ಕಾವ್ಯಗಳು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 9:35 IST
Last Updated 14 ಫೆಬ್ರುವರಿ 2012, 9:35 IST

ಹಾವೇರಿ (ಬ್ಯಾಡಗಿ, ಸರ್ವಜ್ಞ ವೇದಿಕೆ): `ರೈತನ ಗೋಳು ಬರಗಾಲ ಚರ್ಚೆ ಅಂತಾರೆ ವಿಧಾನಸೌಧದಲ್ಲಿ ಕುಳಿತು ಇವರು ನೀಲಿ ಚಿತ್ರ ನೋಡ್ತಾರೆ~ ~ಅಂದು ಆಸೆಯೇ ದುಃಖಕ್ಕೆ ಮೂಲ ಇಂದು ಭ್ರಷ್ಟಾಚಾರಕ್ಕೆ ಆಸೆಯೇ ಮೂಲ~ ~ಕದ್ದು ನೋಡಬೇಕಂದ್ರೂ ಬಂದು ನಿಲ್ತಾರ್ ಮಾಧ್ಯಮದೋರು, ನಾ ಎಲೆಕ್ಷನ್ ನಿಲ್ಲಂದ್ರ ಹ್ಯಾಂಗ ನಿಲ್ಲಲಿ~

ಬ್ಯಾಡಗಿ ಬಿಇಎಸ್ ಕಾಲೇಜು ಸಭಾಭವನದಲ್ಲಿ ಐದನೇ ಜಿಲ್ಲಾ ಉತ್ಸವದ ಕವಿಗೋಷ್ಠಿಯಲ್ಲಿ ಕವಿಗಳು ಪ್ರಸ್ತುತ ರಾಜಕೀಯ ವಿಡಂಬಣೆ, ರಾಜಕೀಯ ಜನರಿಗೆ ಕವನಗಳ ಮೂಲಕವೇ ನೀಡಿದ ಚಾಟಿ ಏಟುಗಳಿವು.

ಅಣ್ಣಾ ಹಜಾರೆ ಅವರು ಭ್ರಷ್ಟಾಚಾರ ವಿರೋಧಿ ಹೋರಾಟ ದಿಂದ ಪ್ರಭಾವಿತ ಹಾಗೂ ಸಮಾಜದಲ್ಲಿ ಬೇರೂರಿರುವ ಭ್ರಷ್ಟಾಚಾರದಿಂದ ರೋಸಿಹೋದ ಕವಿಗಳು ಭ್ರಷ್ಟಾಚಾರ ನಿರ್ಮೂಲನೆ, ಸಮಾಜದಿಂದ, ಪರಿಸರ ಕುರಿತ ಕಾಳಜಿ, ಸಾವಯವ ಕೃಷಿ, ಲಂಚಾವತಾರದಲ್ಲಿ ಅಧಿಕಾರಿಗಳು ಇತ್ತೀಚೆಗೆ ವಿಧಾನಸೌಧದಲ್ಲಿ ಸಚಿವರು ಮೊಬೈಲ್‌ನಲ್ಲಿ ನೋಡಿದ ಬ್ಲೂಫಿಲ್ಮ್, ಹೆಚ್ಚಾಗುತ್ತಿರುವ ಭ್ರೂಣ ಹತ್ಯೆ ಮುಂತಾದ ವಿಷಯಗಳ ಕುರಿತು ಕವಿಗಳು ತಮ್ಮ ಕವನಗಳ ಮೂಲಕ ಬೆಳಕು ಚೆಲ್ಲಿದರು.

ಗುತ್ತೆಮ್ಮ ಮ್ಯಾಗೇರಿ ಅವರ ಅಪ್ಪಂದಿರೆ ನಿಮಗೇಕೆ ಕಾಮಚೇಷ್ಟೆ ಕವನ, ಮನ್ಯುಕುಮಾರ ವೈದ್ಯ ಅವರ `ಆರೋಹಣ~ ಕವನ, ಜೀವರಾಜ ಛತ್ರದ ಅವರ `ನಿರೀಕ್ಷೆ~ ಕವನ ರಾಣೆ ಬೆನ್ನೂರಿನ ಸೀತಾರಾಮ ಕಣೇಗಲ್ ~ಏನ್ ಹೇಳಲಿ ನಾನು ಹೇಗೆ ಹೇಳಲಿ~ ಕವನ, ಶ್ರೀದೇವಿ ಹನಗೋಡಿಮಠ ಅವರ `ಕನ್ನಡಿಗರೇ ನನ್ನೊಡನೆ ಬನ್ನಿ~ ಎನ್ನುವ ಕವನಗಳು ರಾಜಕೀಯ ದುಸ್ಥಿತಿ ಹಾಗೂ ಕನ್ನಡದ ಪರಿಸ್ಥಿತಿಯನ್ನು ಪರಿಚಯಿಸಿದವು.

ಸವಣೂರಿನ ಹಜರೇಸಾಬ್ ನದಾಫ್ ~ಕನಸು~ ಕವನ, ಸಿ.ಸಿ. ಕುಳೇನೂರ ಅವರ ~ಅಲೆಮಾರಿ ಸೋಮಾರಿ~ ಕವನ, ಹಿರೆಕೇರೂರಿನ ಬಿ.ಎಚ್.ನಾಯಕ್ ಅವರು ~ಕಾಯಕವೇ ಕೈಲಾಸ ಅಲ್ಲ~ ಕವನ ವಾಚಿಸಿದರು.

ಅಧ್ಯಕ್ಷತೆ ವಹಿಸಿದ್ದ  ಡಾ.ನಿಂಗಪ್ಪ ಮುದೇನೂರ ಮಾತನಾಡಿ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕವಿಗಳೇ ಅನಭಿಷಿಕ್ತ ದೊರೆಗಳಾಗಿದ್ದಾರೆ. ನಿಸರ್ಗ ಹಾಳು ಮಾಡುವಂತಹ ಮನುಷ್ಯನಿಗೆ ನಮ್ಮ ಕವನಗಳ ಮೂಲಕ ಬುದ್ದಿ ಹೇಳುವ ಕೆಲಸ ಮಾಡಬೇಕಿದೆ ಎಂದರು. ಸಾಹಿತಿಗಳಾದ ಸತೀಶ್ ಕುಲಕರ್ಣಿ, ಗಿರಿಜಾದೇವಿ ದುರ್ಗದಮಠ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿ ಶಿಡ್ಲಾಪುರ ಹಾಜರಿದ್ದರು. ಮಧು ತಿಪ್ಪಶೆಟ್ಟಿ ನಿರೂಪಿಸಿದರು, ಪ್ರೊ. ಕೋಡಬಾಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.