ADVERTISEMENT

ಕಾಡಾನೆ ಮರಿಯೊಂದಿಗೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಭೀತಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 10:15 IST
Last Updated 18 ಅಕ್ಟೋಬರ್ 2012, 10:15 IST

ಹಾನಗಲ್: ಅರಣ್ಯ ಪ್ರದೇಶಕ್ಕೆ ಹೊಂದಿ ಕೊಂಡಿರುವ ತಾಲ್ಲೂಕಿನ ಗಡಿ ಭಾಗದ ಗ್ರಾಮಗಳಲ್ಲಿ ಬುಧವಾರ ಕಾಡಾನೆಗಳು ಪ್ರತ್ಯಕ್ಷಗೊಳ್ಳುವ ಮೂಲಕ ರೈತರು ಸೇರಿದಂತೆ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.

ಮುಂಡಗೋಡ ತಾಲ್ಲೂಕಿನ ಮೂಲಕ ಓಣಿಕೇರಿ, ಕೊಪ್ಪರಸಿಕೊಪ್ಪ ಗ್ರಾಮಗಳಿಗೆ ಕಾಡಾನೆಗಳು ಕಾಲಿಟ್ಟಿದ್ದು, ರೈತರು ಬೆಳೆದ ಭತ್ತ, ಗೋವಿನಜೋಳ, ಬಾಳೆ, ಮಾವು ಬೆಳೆಗಳನ್ನು ತಿಂದು ನಾಶಪಡಿ ಸುತ್ತಿವೆ.

ಬುಧವಾರ ಬೆಳಿಗ್ಗೆ ತಾಲ್ಲೂಕಿನ ಗಾಜೀಪುರ ಸರಹದ್ದಿನಲ್ಲಿರುವ ಕೊಪ್ಪರ ಸಿಕೊಪ್ಪದ ರೈತ ಹಬೀಬವುಲ್ಲಾ ಹಂಚಿನ ಮನಿ ಇವರ ಗೋವಿನ ಜೋಳದ ಹೊಲ ದಲ್ಲಿ ಪ್ರತ್ಯಕ್ಷಗೊಂಡಿರುವ ಪುಟ್ಟ ಮರಿ ಯೊಂದಿಗೆ ಕಂಡುಬಂದ ಕಾಡಾನೆಯನ್ನು ಕಂಡು ಗಾಬರಿಗೊಂಡು ಗ್ರಾಮದಲ್ಲಿ ವಿಷಯ ತಿಳಿಸಿದಾಗ ತಂಡೋಪತಂಡ ವಾಗಿ ಗ್ರಾಮಸ್ಥರು ಹೊಲದತ್ತ ಧಾವಿಸಿ ದರು. ಇದರಿಂದ ಮತ್ತಷ್ಟು ಗಾಬರಿ ಗೊಂಡ ಕಾಡಾನೆ ಗೋವಿನಜೋಳದ ಹೊಲದಿಂದ ಕದಲಲಿಲ್ಲ, ನಾಲ್ಕೂ ದಿಕ್ಕಿನಲ್ಲಿ ಗ್ರಾಮಸ್ಥರು ಗಲಾಟೆ ಮಾಡುತ್ತಿದ್ದುದರಿಂದ ಕಾಡಾನೆಗೆ ದಿಕ್ಕುತೋಚದಂತಾ ಗಿತ್ತು.

ಮಂಗಳವಾರ ರಾತ್ರಿ ಇದೇ ಗ್ರಾಮದ ಕುಂಬಾರ ಓಣಿಯಲ್ಲಿರುವ ಬಸಪ್ಪ ಶಿಗ್ಗಾವಿ ಅವರ ಮನೆಯ ಹಿಂಭಾಗದ ಮಾವಿನ ತೋಟದಲ್ಲಿನ ಭತ್ತದ ಹುಲ್ಲಿನ ಬಣವೆಯನ್ನು ಕಿತ್ತುಹಾಕಿ ತಿಂದು ಹೋಗಿವೆ. ಬುಧವಾರ ಬೆಳಗಿನಜಾವ ಕೊಪ್ಪರಸಿಕೊಪ್ಪ ಗ್ರಾಮದ ಅಶೋಕ ಜಾಧವ ಅವರ ಬಾಳೆ ತೋಟದಲ್ಲಿ ಅಡ್ಡಾಡಿದ ಗುರುತುಗಳು ಕಂಡುಬಂದಿವೆ. ಪುಟ್ಟಮರಿಯೊಂದಿಗೆ ಬಂದಿರುವ ಕಾಡಾನೆ ನಿಧಾನಗತಿಯಲ್ಲಿ ಈ ಪ್ರದೇಶದಲ್ಲಿ ತಿರುಗಾಡುತ್ತಿದ್ದು, ಗ್ರಾಮಸ್ಥರನ್ನು ಭೀತಿಗೊಳಪಡಿಸಿದೆ. ಇದರೊಂದಿಗೆ ಐದಾರು ಆನೆಗಳ ತಂಡ ಕಳೆದ ಒಂದು ವಾರದಿಂದ ಓಣಿಕೇರಿ, ಹುಡಾ, ಗಾಜೀಪುರ ಭಾಗಗಳ ನೀಲಗಿರಿ ತೋಪಿನಲ್ಲಿ ಅಡ್ಡಾಡಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿ ಜಿ,ಎಸ್. ಪಾಟೀಲ, ಎಂ.ಎ.ಬಣಗಾರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಝಾಂಜ ಹಾಗೂ ಮದ್ದುಗಳ ಶಬ್ದದ ಮೂಲಕ ಕಾಡಾನೆ ಹಾಗೂ ಮರಿಯನ್ನು ಮರಳಿ ಕಾಡಿಗಟ್ಟಲು ಹರಸಾಹಸ ಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.