ADVERTISEMENT

ಕಾಮಗಾರಿ ಕಳಪೆಯಾದರೆ ಶಿಸ್ತು ಕ್ರಮ

ನಗರೋತ್ಥಾನ ಕಾಮಗಾರಿಗೆ ಚಾಲನೆ ಕಾರ್ಯಕ್ರಮದಲ್ಲಿ ಸಚಿವ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 8:27 IST
Last Updated 16 ಜೂನ್ 2018, 8:27 IST

ರಾಣೆಬೆನ್ನೂರು: ನಗರದ ಸೌಂದರ್ಯವನ್ನು ಹೆಚ್ಚಿಸಲು ಅಧಿಕಾರಿಗಳು ಚುನಾಯಿತ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿಗಳನ್ನು ಕೈಗೊಳ್ಳಬೇಕು. ನಗರದ ಜನತೆ ಕೂಡ ಸಹಕಾರ ನೀಡಬೇಕು. ಗುತ್ತಿಗೆದಾರರು ಕಳಪೆ ಕಾಮಗಾರಿಗೆ ಮಾಡಿದರೆ ಅಂತವರ ಮೇಲೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಅರಣ್ಯ ಹಾಗೂ ಪರಿಸರ ವಿಜ್ಞಾನ ಸಚಿವ ಆರ್‌.ಶಂಕರ್‌ ಎಚ್ಚರಿಕೆ ನೀಡಿದರು.

ಇಲ್ಲಿನ ದೇವರಗುಡ್ಡ ರಸ್ತೆಯ ಹರಳಯ್ಯನಗರದಲ್ಲಿ ನಗರೋತ್ಥಾನ–3 ಯೋಜನೆಯಡಿಯಲ್ಲಿ ಅನುಮೋದನೆಗೊಂಡ ₹14.86 ಲಕ್ಷ ಅನುದಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ರಾಣೆಬೆನ್ನೂರನ್ನು ಬೆಂಗಳೂರು ಮಾದರಿಯಲ್ಲಿ ಅಭಿವೃದ್ಧಿ ಪಡಿಸುವುದು ನಮ್ಮ ಮುಖ್ಯ ಗುರಿಯಾಗಿದೆ. ಅಧಿಕಾರಿಗಳು ಸಹಕಾರ ನೀಡಬೇಕು. ಅಧಿಕಾರಿಗಳು ಮತ್ತು ಚುನಾಯಿತ ಸದಸ್ಯರು ನಗರೋತ್ಥಾನ ಅಭಿವೃದ್ಧಿ ಕಾಮಗಾರಿಯನ್ನು ಯಶಸ್ವಿಗೊಳಿಸಬೇಕು ಎಂದರು.

ADVERTISEMENT

ನಗರಸಭೆಯಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ₹ 50 ಲಕ್ಷ ಅನುದಾನವನ್ನು ಮೀಸಲಿಡಲಾಗಿದೆ. 22ನೇ ವಾರ್ಡ್‌ನಲ್ಲಿ ಕೊಳಚೆ ಪ್ರದೇಶವನ್ನು ತೆಗೆದು ಅಲ್ಲಿ ಜಿ +3 ಮಾದರಿಯಲ್ಲಿ ಕಟ್ಟಡ ಕಟ್ಟಿ ಅಲ್ಲಿನ ನಿವಾಸಿಗಳಿಗೆ ಮನೆಗಳನ್ನು ನೀಡಲು ನೀಲನಕ್ಷೆ ತಯಾರಿಸಿ ಕ್ರಿಯಾ ಯೋಜನೆ ಮಾಡಿಕೊಡಲು ದೂರ ದೃಷ್ಟಿ ಇಟ್ಟುಕೊಂಡು ಕಾರ್ಯಪ್ರವೃತ್ತರಾಗಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ನಗರದಲ್ಲಿ ಇರುವ ಕೊಳೆಚೆ ಪ್ರದೇಶಗಳನ್ನು ನಿರ್ಮೂಲನೆ ಮಾಡಲು ಏನು ಕ್ರಮಕೈಗೊಳ್ಳಬಹುದು ಎಂಬುದರ ಬಗ್ಗೆ ಅಧಿಕಾರಿಗಳು ಸಂಪೂರ್ಣ ಮಾಹಿತಿ ನೀಡಬೇಕು. ಕೊಳೆಚೆಪ್ರದೇಶ ಮುಕ್ತ ಮಾಡಲು ಪ್ರತಿಯೊಬ್ಬರೂ ಮುಂದಾಗೋಣ. ಅಧಿಕಾರಿ ಶಾಸ್ವತವಲ್ಲ, ಅಧಿಕಾರದಲ್ಲಿ ಇರುವಷ್ಟು ದಿನಗಳಲ್ಲಿ ಉತ್ತಮ ಕೆಲಸ ಮಾಡೋಣ ಎಂದರು.

ನಗರಸಭೆ ಅಧ್ಯಕ್ಷೆ ಆಶಾ ಗುಂಡೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರಸಭೆ ಸದಸ್ಯರಾದ ಪ್ರಭುಲಿಂಗಸ್ವಾಮಿ ಕರ್ಜಗಿಮಠ, ರತ್ನಾ ಪುನೀತ ಮಾತನಾಡಿದರು.

ಫಾತೀಮಾಬಿ ಹಾಂಶಪುರ ಶೇಖ್, ಮೊಬಿನಾ ಕೋಂ ಶಾಬುದ್ದೀನ್‌ ಹರಪನಹಳ್ಳಿ, ಶೇಖಪ್ಪ ಹೊಸಗೌಡ್ರ, ಮಂಜುಳಾ ಕುಮಾರಪ್ಪನವರ, ಮೆಹಬೂಬ ಮುಲ್ಲಾ, ಹಾಗೂ ಯೋಜನಾ ನಿರ್ದೇಶ ಆರ್‌.ವಾಸಣ್ಣ, ಪೌರಾಯುಕ್ತ ಡಾ.ಮಹಾಂತೇಶ್‌ ಎನ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎಂ.ವಿ.ಗಿರಡ್ಡಿ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.