ADVERTISEMENT

‘ಗುಡಗೇರಿಯಲ್ಲಿ ಬಸವರಾಜ ಸ್ಮಾರಕ’

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 5:43 IST
Last Updated 22 ಅಕ್ಟೋಬರ್ 2017, 5:43 IST

ಶಿಗ್ಗಾವಿ: ‘ರಂಗಭೂಮಿಗೆ ಅಪೂರ್ವ ಕೊಡುಗೆ ನೀಡಿದ ದಿವಂಗತ ಗುಡಗೇರಿ ಎನ್.ಬಸವರಾಜರ ಸ್ಮರಣಾರ್ಥ ಅವರ ಹುಟ್ಟೂರಾದ ಗುಡಗೇರಿಯಲ್ಲಿ ಸ್ಮಾರಕ ನಿರ್ಮಿಸಲಾಗುವುದು’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಗೊಟಗೋಡಿ ಉತ್ಸವ ರಾಕ್ ಗಾರ್ಡನ್‌ನ ಜಾನಪದ ರಂಗಮಂದಿರದಲ್ಲಿ ಶನಿವಾರ ಗುಡಗೇರಿ ಎನ್. ಬಸವರಾಜ ಅವರ ತೃತೀಯ ಸ್ಮರಣೋತ್ಸವದ ಅಂಗವಾಗಿ ನಡೆದ 'ರಂಗಭೂಮಿ ರತ್ನ' ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

'ಕಲೆ ಯಾರ ಆಸ್ತಿಯೂ ಅಲ್ಲ. ಸಾಧನೆಯ ಮನಸ್ಸು, ಛಲ ಹಾಗೂ ಕಠಿಣ ಪರಿಶ್ರಮವಿದ್ದರೆ ಅಪೂರ್ವ ಲೋಕ ಸೃಷ್ಟಿಸಬಹುದು ಎಂಬುದಕ್ಕೆ ಜಾನಪದ ಶಿಲ್ಪಲೋಕ ಎಂದೇ ಖ್ಯಾತಿ ಪಡೆದಿರುವ ‘ಉತ್ಸವ ರಾಕ್ ಗಾರ್ಡನ್’ ಸಾಕ್ಷಿಯಾಗಿದೆ ಎಂದರು.

ADVERTISEMENT

‘ರಾಜಕೀಯ, ಶಿಕ್ಷಣ, ಸಾಹಿತ್ಯ, ವೈದ್ಯಕೀಯ ಮತ್ತಿತರ ಕ್ಷೇತ್ರಗಳಲ್ಲಿ ವೃತ್ತಿಯೊಂದಿಗೆ ಸಾಧನೆ ಮಾಡಬಹುದು. ಆದರೆ ರಂಗಭೂಮಿ ಹಾಗೂ ಕಲಾ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಬೇಕಾದರೆ ಜೀವನವನ್ನೇ ಮೂಡಿಪಿಡಬೇಕಾಗುತ್ತದೆ.ಎನ್.ಬಸವರಾಜ ಪ್ರಶಸ್ತಿ ಪಡೆದಿರುವ ಬೆಳಗಲಿ ಕೊಟ್ರೇಶ್ ಮಾಸ್ತರ್‌ ಅವರು ನಾಟಕಗಳ ಸರದಾರ.

2500ಕ್ಕೂ ಹೆಚ್ಚಿನ ನಾಟಕ ಪ್ರದರ್ಶನ ನೀಡಿದ್ದಾರೆ. ಅವರ ಜೀವನ ಶ್ರೇಷ್ಠ ಸಾಧನೆಗೆ ‘ರಂಗಭೂಮಿ ರತ್ನ’ ಪ್ರಶಸ್ತಿ ನೀಡಿರುವುದು ಕ್ಷೇತ್ರದ ಜನತೆಯಲ್ಲಿ ಹರ್ಷ ಮೂಡಿದೆ’ ಎಂದರು.

ಎನ್.ಬಸವರಾಜ ಅವರು ರಂಗಭೂಮಿ ರತ್ನ ಅವರ ಸ್ಮರಣಾರ್ಥ ₹ 20 ಸಾವಿರ ನಗದು ಬಹುಮಾನ ಹಾಗೂ ಫಲಕ ನೀಡುತ್ತಿರುವ ಉತ್ಸವ ರಾಕ್ ಗಾರ್ಡನ್ ಸಮಿತಿ ಕಾರ್ಯ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.

ವಿಧಾನಪರಿಷತ್ ಸದಸ್ಯ ಮೋಹನ ಕೊಂಡಜ್ಜಿ, ದೇಶವೇ ಹೆಮ್ಮೆ ಪಡುವಂಥ ವಿಶಿಷ್ಟವಾದ 'ಉತ್ಸವ ರಾಕ್ ಗಾರ್ಡನ್' ಎಂಬ ವಿಶಿಷ್ಟ ಲೋಕ ನಿರ್ಮಿಸಿರುವ ಪ್ರೊ.ಟಿ.ಬಿ.ಸೊಲಬಕ್ಕನವರ ಅವರಿಗೆ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಸಲ್ಲಬೇಕು. ನಮ್ಮ ಅಧಿಕಾರವಧಿಯಲ್ಲಿ ಹರಿಹರ ತಾಲ್ಲೂಕು ಕೊಂಡಜ್ಜಿಯಲ್ಲಿ 'ವೃತ್ತಿ ರಂಗಭೂಮಿ ತರಬೇತಿ ಕೇಂದ್ರ' ತೆರೆಯಬೇಕೆಂದು ನಿರ್ಧರಿಸಿದ್ದೇನೆ ಎಂದು ಹೇಳಿದರು.

ಸನ್ಮಾನ ಸ್ಮೀಕರಿಸಿದ ಬೆಳಗಲಿ ಕೊಟ್ರೇಶ್ ಮಾಸ್ತರ ಮಾತನಾಡಿ, ‘ಈ ಪ್ರಶಸ್ತಿ ನನಗೆ ದೊರೆತದ್ದಲ್ಲ. ನಮ್ಮ ನಾಡಿನ ಜನತೆಗೆ ದೊರೆತದ್ದು. ನನಗೆ ಪ್ರಶಸ್ತಿ ನೀಡಿ ಗೌರವಿಸಿದ ಉತ್ಸವ ರಾಕ್ ಗಾರ್ಡನ್ ಸಮಿತಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ’ ಎಂದರು.

ಇದೇ ವೇಳೆ ವಿವಿಧ ಕಲಾವಿದರ ಸಂಘಗಳಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಬೆಳಗಲಿ ಮಾಸ್ತರ ಅವರನ್ನು ಸನ್ಮಾನಿಸಿ ಗೌರವಿಸಿದರು. ಉತ್ಸವ ರಾಕ್ ಗಾರ್ಡನ್ ರೂವಾರಿ ಸೊಲಬಕ್ಕನವರ ಅಧ್ಯಕ್ಷತೆ ವಹಿಸಿದ್ದರು. ಹರಪನಹಳ್ಳಿ ಪರಶುರಾಮ ಬಿ, ಉಪನ್ಯಾಸಕ ಡಾ.ಶ್ರೀಶೈಲ ಹುದ್ದಾರ, ರಂಗ ಸಮಾಜದ ಮಲ್ಲಿಕಾರ್ಜುನ ಕಡಕೋಳ ಭಾಗವಹಿಸಿದ್ದರು. ಪ್ರಕಾಶಗೌಡ ಗಡಿಯಪ್ಪ ಗೌಡರ ನಿರೂಪಿಸಿದರು. ಅಲ್ತಾಫ್ ಯತ್ನಳ್ಳಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.