ADVERTISEMENT

ಗುತ್ತಲದಲ್ಲಿ ಪ್ರಜ್ವಲಿಸಿದ ಹಣತೆಯ ಬೆಳಕು

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 8:21 IST
Last Updated 3 ಜನವರಿ 2014, 8:21 IST

ಹಾವೇರಿ:  ಪ್ರತಿ ವರ್ಷದಂತೆ ಈ ವರ್ಷ ಕೂಡ ತಾಲ್ಲೂಕಿನ ಗುತ್ತಲ ಗ್ರಾಮದ ಹೇಮಗಿರಿ ಚನ್ನಬಸವೇಶ್ವರ ಮಠದಲ್ಲಿ ಕಾರ್ತಿಕೋತ್ಸವದ ಅಂಗವಾಗಿ ಬುಧ­ವಾರ ರಾತ್ರಿ ಭಕ್ತರು ಗುತ್ತಲ ಗ್ರಾಮ­ದೆಲ್ಲಡೆ ಹಣತೆಗಳನ್ನು ಹಚ್ಚಿದರು. ಹೇಮಗಿರಿ ಚನ್ನಬಸವೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ವೇಳೆಯಲ್ಲಿ ಗ್ರಾಮಸ್ಥರು ಸ್ಥಳೀಯ ಬಸ್ ನಿಲ್ದಾಣ, ಅಂಗ್ಲಾಪುರ ಓಣಿ ಸೇರಿದಂತೆ ಗ್ರಾಮದ ರಸ್ತೆಗಳ ಮೇಲೆ ಇಡಲಾಗಿದ್ದ ಸಾಲ ಸಾಲು ದೀಪಗಳನ್ನು ಹಚ್ಚಿ ಭಕ್ತಿ ಭಾವದಿಂದ ಮೆರದರು.

ಮಠದ ಎದುರಿಗಿನ ಕಲ್ಯಾಣ ಮಂಟ­ಪದಲ್ಲಿ ರಂಗೋಲಿಯ ನಡುವೆ ಹಚ್ಚ­ಲಾಗಿದ್ದ ದೀಪಗಳು ಎಲ್ಲರನ್ನು ಆಕರ್ಷಿ­ಸಿದರೆ, ಮಠ ಹಾಗೂ ನಗಾರಿಖಾನೆ ದೀಪಗಳಿಂದ ಕಂಗೊಳಿಸುತ್ತಿದ್ದ ದೃಶ್ಯ ಮನಮೋಹಕವಾಗಿತ್ತು. ಅಲ್ಲದೇ, ಹರ ಹರ ಮಹಾದೇವ ಎಂದು ಜೈಘೋಷ ಹಾಕುವ ಮೂಲಕ ಭಕ್ತರು ಹಣತೆ­ಗಳನ್ನು ಹಚ್ಚುವುದು ಸಾಮಾನ್ಯ­ವಾಗಿತ್ತು.

ದೀಪೋತ್ಸವದಲ್ಲಿ ಹಾವೇರಿ, ರಾಣೆ­ಬೆನ್ನೂರ, ಬ್ಯಾಡಗಿ, ಕಂಚಾರ­ಗಟ್ಟಿ, ಹಾವನೂರ, ಬಸಾಪುರ, ನೆಗಳೂರ, ಬೆಳವಿಗಿ, ತಿಮ್ಮಾಪುರ, ಬೊಮ್ಮನಕಟ್ಟಿ, ಹೊಸರಿತ್ತಿ, ಅಕ್ಕೂರ, ಮರಡೂರ, ಕನವಳ್ಳಿ, ಭರಡಿ, ಕೂರಗುಂದ ಸೇರಿದಂತೆ ಅನೇಕ ಊರುಗಳ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

ಸದ್ಗುಣ ಬೆಳೆಸಿಕೊಳ್ಳಲು ಸಲಹೆ
ಅಕ್ಕಿಆಲೂರ:
‘ಭಗವಂತನ ಅದ್ಭುತ ಸೃಷ್ಟಿಗಳಲ್ಲಿ ರಕ್ತವೂ ಒಂದು. ಇಂತಹ ಅಮೂಲ್ಯ ರಕ್ತವನ್ನು ಯುವಕರು ದುಶ್ಚಟಗಳಿಂದ ನಾಶಪಡಿಸಿ­ಕೊಳ್ಳುತ್ತಿರುವುದು ಕಳವಳಕಾರಿ ಸಂಗತಿ’ ಎಂದು ಬಾಳೇಹೊಸೂರಿನ ದಿಂಗಾ­ಲೇಶ್ವರ ಸ್ವಾಮೀಜಿ ಹೇಳಿದರು.

ಇಲ್ಲಿಯ ಚನ್ನವೀರೇಶ್ವರ ವಿರಕ್ತಮಠ­ದಲ್ಲಿ ಬಾಳೇಹೊಸೂರಿನ ದಿಂಗಾಲೇಶ್ವರ ನೂತನ ಮಠ ಲೋಕಾರ್ಪಣೆಯ ಹಿನ್ನೆಲೆಯಲ್ಲಿ ನಡೆದ ಧಾರ್ಮಿಕ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಹಾವೇರಿಯ ಹುಕ್ಕೇರಿಮಠದ ಸದಾ­ಶಿವ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ, ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ, ಬಿಜಕಲ್ಲಿನ ಶಿವಲಿಂಗ ಸ್ವಾಮೀಜಿ, ಹರನಾಳದ ಸಂಗನಬಸವ ಸ್ವಾಮೀಜಿ, ಸ್ಥಳೀಯ ಮುತ್ತಿನ ಕಂತಿಮಠದ ಚಂದ್ರಶೇಖರ ದೇವರು, ಮಲ್ಲನಕೇರಿಯ ಬಸವರಾಜ ದೇವರು, ಸೊಲ್ಲಾಪುರದ ಪ್ರಭು ದೇವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 5 ಜನ ವ್ಯಸನಿಗಳು ದುಶ್ಚಟ ತ್ಯಜಿಸುವ ಸಂಕಲ್ಪದೊಂದಿಗೆ ದೀಪ ಬೆಳಗಿಸಿ ಧಾರ್ಮಿಕ ಗೋಷ್ಠಿ ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.