ADVERTISEMENT

ಗುರಿ ತಲುಪದ ಅಧಿಕಾರಿಗಳ ಮೇಲೆ ಕ್ರಮ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 7:00 IST
Last Updated 17 ಜುಲೈ 2012, 7:00 IST

ಹಾವೇರಿ: `ಇಂದಿರಾ ಆವಾಸ್ ಯೋಜನೆಯಲ್ಲಿ ಜಿಲ್ಲೆಗೆ ನಿಗದಿ ಪಡಿಸಲಾದ ಗುರಿ ಸಾಧನೆಗೆ ಅಧಿಕಾರಿಗಳು ಗಂಭೀರ ಪ್ರಯತ್ನ ನಡೆಸಬೇಕು. ನಿರ್ಲಕ್ಷ್ಯವಹಿಸುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು~ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್ ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.
2005-06 ರಿಂದ 2012-13 ರವರೆಗೆ ಜಿಲ್ಲೆಯಲ್ಲಿ 23,367 ಮನೆಗಳ ಗುರಿ ಹೊಂದಲಾಗಿದ್ದು, ಅವುಗಳಲ್ಲಿ 11,892 ಮನೆಗಳನ್ನು ನಿರ್ಮಿಸಲಾಗಿದೆ. 4,573 ಮನೆಗಳನ್ನು ಪ್ರಗತಿಯಲ್ಲಿವೆ.

ಇನ್ನೂ 6,902 ಮನೆಗಳನ್ನು ಆರಂಭಿಸಲಾಗಿಲ್ಲ. ಕೂಡಲೇ ಆರಂಭಿಸದಿರುವ ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಹೆಳಿದರು.ಈ ಸಂದರ್ಭದಲ್ಲಿ ಫಲಾನುಭವಿಗಳ ಆಯ್ಕೆ ವಿಳಂಬದಿಂದಲೇ ಮನೆಗಳ ನಿರ್ಮಾಣ ಕಾರ್ಯ ನಿಗದಿತ ಗುರಿ ತಲುಪಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.


ಸಭೆಯ ಅಧ್ಯಕ್ಷತೆ ವಹಿಸಿದ್ದ ಶಿವಕುಮಾರ ಉದಾಸಿ ಅವರು, ಯಾವ ಕ್ಷೇತ್ರದಲ್ಲಿ ಫಲಾನುಭವಿಗಳ ಆಯ್ಕೆ ಹಿಂದಿದೆ ಎಂಬುದನ್ನು ಗಮನಿಸಿ ಅಲ್ಲಿನ ಜನಪ್ರತಿನಿಧಿಗಳ ಮೇಲೆ ಫಲಾನುಭವಿಗಳ ಆಯ್ಕೆ ಮಾಡುವಂತೆ ಒತ್ತಡ ತಂದು ಆದಷ್ಟು ಬೇಗ ಮನೆ ನಿರ್ಮಾಣ ಕಾರ್ಯವನ್ನು ಮುಗಿಸಬೇಕು ಎಂದು ಸಲಹೆ ಮಾಡಿದರು.

2.4 ಲಕ್ಷ ಸಸಿ ನೆಡುವ ಗುರಿ:
ಪ್ರಸಕ್ತ ವರ್ಷದ ಮಳೆಗಾಲದಲ್ಲಿ ಜಿಲ್ಲೆಯ ಜಲಾನಯನ ಪ್ರದೇಶದಲ್ಲಿ 2.4 ಲಕ್ಷ ತೋಟಗಾರಿಕಾ ಸಸಿಗಳನ್ನು ನೆಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಜಲಾನಯನ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಈಗಾಗಲೇ ಸಸಿಗಳ ತಯಾರಿಕಾ ಕಾರ್ಯ ಪೂರ್ಣಗೊಂಡಿದ್ದು, 79 ಸಾವಿರ ಮಾವು, 32 ಸಾವಿರ ಚಿಕ್ಕು, 72 ಸಾವಿರ ತೆಂಗು. 30 ಸಾವಿರ ನಿಂಬೆ. 40 ಸಾವಿರ ನುಗ್ಗೆ ಸೇರಿದಂತೆ ಪೇರಲ ಸಸಿಗಳನ್ನು ತಯಾರಿಸಲಾಗಿದೆ. ಆದರೆ, ಮಳೆ ವಿಳಂಬವಾಗಿದ್ದರಿಂದ ಅವುಗಳನ್ನು ನೆಡುವ ಕೆಲಸವಾಗಿಲ್ಲ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಮಹೇಂದ್ರ ಬಡಳ್ಳಿ ಅವರು, 2010ರಲ್ಲಿ ಫಲಾನುಭವಿಗಳಿಗೆ ನೀಡಲಾದ ಸಸಿಗಳ ಸ್ಥಿತಿಗತಿ ಏನೆಂಬುದನ್ನು ತಿಳಿದುಕೊಳ್ಳಲು ಕ್ಷೇತ್ರಕ್ಕೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳು ವಿನಂತಿಸಿದರು. ಅದಕ್ಕೆ ಸಂಸದ ಶಿವಕುಮಾರ ಉದಾಸಿ ಅವರು ಜುಲೈ 30ರಂದು ಪರಿಶೀಲನಾ ಕಾರ್ಯ ಆಯೋಜಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ವಿದ್ಯುತ್ ಸಂಪರ್ಕ: ಬರ ನಿರ್ವಹಣೆಗಾಗಿ ಜಿಲ್ಲೆಯಲ್ಲಿ ಕೊರೆಯಲಾದ 340ಕ್ಕೂ ಹೆಚ್ಚು ಬೋರವೆಲ್‌ಗಳಲ್ಲಿ 200ಕ್ಕೂ ಹೆಚ್ಚು ಬೋರವೆಲ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಉಳಿದವುಗಳಿಗೆ ಶೀಘ್ರವೇ ಸಂಪರ್ಕ ಕಲ್ಪಿಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಜಿ.ಪಂ. ಕಾರ್ಯ ನಿರ್ವಾಹಕ ಎಂಜಿನಿಯರ್ ಶ್ರೀಕಾಂತ ಮೈಸೂರ ತಿಳಿಸಿದರು.

ಬೋರವೆಲ್ ಕೊರೆದ ತಕ್ಷಣವೇ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗದಿದ್ದರೆ, ಬೋರವೆಲ್ ಏಕೆ ಕೊರೆಯುತ್ತೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಖಾಸಗಿ ಸಹಭಾಗಿತ್ವ ಕೇಳಿ: 
ಸಂಪೂರ್ಣ ನೈರ್ಮಲ್ಯ ಯೋಜನೆಯನ್ನು ನಿರ್ಮಲ ಭಾರತ ಯೋಜನೆ ಎಂದು ಹಸರು ಬದಲಾಯಿಸಲಾಗಿದ್ದು, ಜಿಲ್ಲೆಯಲ್ಲಿ ಈ ಯೋಜನೆಯಡಿ ಶೌಚಾಲಯ ನಿರ್ಮಿಸಲು ಸರ್ಕಾರ ಒಂದು ಸಾವಿರ ರೂ.ವರೆಗೆ ಹಣಕಾಸಿನ ನೆರವು ನೀಡುತ್ತದೆ. ಹೆಚ್ಚಿನ ಹಣವನ್ನು ಫಲಾನುಭವಿಗಳು ಹಾಕಿಕೊಳ್ಳಬೇಕು.
 
ಇಲ್ಲವಾದರೆ, ಶಿಗ್ಗಾವಿ ತಾಲ್ಲೂಕಿನಲ್ಲಿ ಖಾಸಗಿ ಸಂಸ್ಥೆಯೊಂದು ಸಹಭಾಗಿತ್ವ ನೀಡಲು ಮುಂದೆ ಬಂದಿರುವಂತೆ, ಜಿಲ್ಲೆಯ ಇತರ ತಾಲ್ಲೂಕುಗಳಲ್ಲಿ ಅಂತಹ ಖಾಸಗಿ ಸಂಸ್ಥೆಯನ್ನು ಸಹಭಾಗಿತ್ವಕ್ಕಾಗಿ ಕೇಳಿಕೊಳ್ಳುವಂತೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಸಲಹೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.