ADVERTISEMENT

ಚರಂಡಿ ಅವ್ಯವಸ್ಥೆ: ಗುತ್ತಲ ಪಂಚಾಯಿತಿ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 7:35 IST
Last Updated 16 ಅಕ್ಟೋಬರ್ 2012, 7:35 IST

ಗುತ್ತಲ: ಪಟ್ಟಣದ ಬಹತೇಕ  ವಾರ್ಡ್‌ಗಳಲ್ಲಿ ಚರಂಡಿಗಳ ಸಮರ್ಪಕ ನಿರ್ವಹಣೆ ಇಲ್ಲದೆ ಇರುವುದರಿಂದ,  ಸೊಳ್ಳೆಗಳ ಕಾಟ ವಿಪರೀತವಾಗಿ ರೋಗ ರುಜಿನಿಗಳು ಪ್ರಾರಂಭವಾಗುವಂತಹ ಸಂದರ್ಭ ಇಲ್ಲಿನ ಜನರಿಗೆ ಒದಗಿದೆ.

ಪಟ್ಟಣದ ಕುರಬಗೇರಿ ಓಣಿಯ 2ನೇ ವಾರ್ಡಿನಲ್ಲಿ ಚರಂಡಿಗಳು ತುಂಬಿ ತುಳುಕುತ್ತಿವೆ. ಇದರಿಂದ ಈ   ವಾರ್ಡಿನಲ್ಲಿ ರಾತ್ರಿಯಾಗುತ್ತಿದ್ದಂತೆ ಸೊಳ್ಳೆಗಳ ಕಾಟದಿಂದ ಮಲಗುವುದು ದುರ್ಲಭವಾಗಿದೆ.
ಸಂಜೆಯಾಯಿತೆಂದರೆ ಮನೆ ಬಾಗಿಲ ಮುಂದೆ ಕುಳಿತುಕೊಳ್ಳುವ ಹಾಗಿಲ್ಲ, ನೊಣಗಳು ಮುಕ್ಕರಿಸಿದ ಹಾಗೆ         ಸೊಳ್ಳೆಗಳು ಮುತ್ತಿಕೊಳ್ಳುತ್ತವೆ.        ಪ್ರತಿದಿನ ಇದೇ ರೀತಿಯಾದರೆ ಮಕ್ಕಳ, ಮರಿ ಕಟ್ಟಿಕೊಂಡು ಇಲ್ಲಿ ಜೀವನ ಮಾಡುವುದು ಹ್ಯಾಗ್ರಿ ಅಂತಾರೆ ಗೃಹಣಿ ಮಲ್ಲವ್ವ.

ಜಿಲ್ಲೆಯಲ್ಲಿ ದೊಡ್ಡ ಪಂಚಾಯಿತಿ ಎಂಬ ಹೆಗ್ಗಳಿಕೆ ನೆಪ ಮಾತ್ರಕ್ಕೆ ಅಂದರೆ ತಪ್ಪಾಗಲಾರದು. ಸುಮಾರು 20 ರಿಂದ 25 ಸಾವಿರ ಜನಸಂಖ್ಯೆಯನ್ನು ಹೊಂದಿರುವ ಈ ಗುತ್ತಲ ಪಟ್ಟಣದಲ್ಲಿ, ಚರಂಡಿಗಳನ್ನು ಪ್ರತಿ ತಿಂಗಳಿಗೊಮ್ಮೆಯಾದರೂ ಸ್ವಚ್ಛಗೊಳಿಸುವ ಗೋಜಿಗೆ ಪಂಚಾಯಿತಿಯವರು ಹೋಗುವುದಿಲ್ಲ.

ಮಳೆಗಾಲದ  ದಿನಗಳಲ್ಲಿ ಚರಂಡಿಯ ನೀರೆಲ್ಲ ರಸ್ತೆಯ ಮೇಲೆ ಬರುವುದರಿಂದ, ಚರಂಡಿಯ  ನೀರಿನಲ್ಲಿ ಮಕ್ಕಳು ಆಟವಾಡುತ್ತಾರೆ. ಮುದಕರು,  ಅಂಗವಿಕಲರು  ಓಡಾಡದಂತಹ ಪರಿಸ್ಥಿತಿ ಇಲ್ಲಿ  ನಿರ್ಮಾಣವಾಗಿದೆ. ಅನೇಕ ಬಾರಿ ಚರಂಡಿಗಳನ್ನು ಸ್ವಚ್ಛಗೊಳಿಸಿ ಎಂದು ಜನಪ್ರತಿನಿಧಿಗಳಿಗೆ ಮತ್ತು ಪಂಚಾಯಿತಿ ಅಧಿಕಾರಿಗಳಿಗೆ  ಹೇಳಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಇಲ್ಲಿನ ವಾಸಿಗಳು.

ಓಣಿಯಲ್ಲಿ ಫಾಗಿಂಗ್ ಮಾಡುವ ಯೋಚನೆಯನ್ನೂ ಸಹ ಪಂಚಾಯಿತಿ ಮಾಡುತ್ತಿಲ್ಲ ಎನ್ನುತ್ತಾರೆ ನಾಗರಿಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.