ರಟ್ಟೀಹಳ್ಳಿ: ಸಮೀಪದ ಕುಡಪಲಿ ಗ್ರಾಮದ ರೈತ ರಾಘವೇಂದ್ರ ಕುಲಕರ್ಣಿ ಅವರ ಹೊಲದಲ್ಲಿ ತುಂಗಾ ಮೇಲ್ದಂಡೆ ಉಪ ಕಾಲುವೆಯ ಮೂಲಕ ಹರಿದು ಬಂದ ನೀರು ಹೊಲದಲ್ಲಿ ನಿಲ್ಲುತ್ತಿದೆ. ಗ್ರಾಮದ ಸರ್ವೆ ನಂಬರ್ 135/1 ರಲ್ಲಿ ಕ್ಷೇತ್ರ 11 ಎಕರೆ 16 ಗುಂಟೆ ಪ್ರದೇಶಕ್ಕೆ ತುಂಗಾ ಮೇಲ್ದಂಡೆ ಕಾಲುವೆಯ ಮುಖ್ಯ ಕಾಲುವೆಯಿಂದ ಉಪಕಾಲುವೆಯ ಮೂಲಕ ನೀರು ಹರಿದು ಬರುತ್ತದೆ.
ಆದರೆ 1 ಎಕರೆ ಪ್ರದೇಶದಲ್ಲಿ ಇಂತಹ ದೃಶ್ಯ ಪ್ರತಿ ವರ್ಷ ಸಾಮಾನ್ಯವಾಗಿ ಬಿಟ್ಟಿದೆ. ಈ ಹಿಂದಿನ ವರ್ಷ ಕೂಡಾ ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತು ಬೆಳೆ ಹಾನಿ ಸಂಭವಿಸಿತ್ತು. ಇಲಾಖೆಗೆ ಫೊಟೊ ಸಮೇತ ವರದಿ ಸಲ್ಲಿಸಿದರೂ ಇಲ್ಲಿಯವರೆಗೆ ಬೆಳೆ ಹಾನಿ ದೊರೆತಿಲ್ಲ. ಈ ವರ್ಷ ಕೂಡಾ 1 ಎಕರೆ ಪ್ರದೇಶದಲ್ಲಿ ಇದೇ ರೀತಿ ನೀರು ನಿಂತಿದೆ. ಇದರಿಂದ ಭೂಮಿ ಸತ್ವ ಕಳೆದುಕೊಂಡಿದೆ. ಬೆಳೆ ಹಾನಿ ಸಾಮಾನ್ಯವಾಗಿದೆ. ಆದರೆ ಪರಿಹಾರ ಮಾತ್ರ ಶೂನ್ಯ. ಇಂತಹ ಪರಿಸ್ಥಿತಿ ಮೂರು ವರ್ಷದಿಂದ ಮುಂದುವರಿದಿದೆ.
ಇಲ್ಲಿಂದ ಮುಂದೆ ಎತ್ತರದ ಪ್ರದೇಶವಾದ ಕಾರಣ ನೀರು ಮುಂದೆ ಹರಿಯದೆ ಇಲ್ಲಿಯೇ ನಿಲ್ಲುತ್ತದೆ. ಅಂದಿನ ಎಂಜಿನಿಯರ ದಯಾನಂದರವರಿಗೆ ಸಮಸ್ಯೆಯನ್ನು ಮನದಟ್ಟು ಮಾಡಿದಾಗ ಸಮಸ್ಯೆ ಬಗೆ ಹರಿಸುವುದಾಗಿ ತಿಳಿಸಿದ್ದರು. ಆದರೆ ಒಂದಿಂಚೂ ಪ್ರಗತಿ ಕಾಣದೆ ಸಮಸ್ಯೆ ಇಂದಿಗೂ ಮುಂದುವರಿದಿದೆ.
ರೈತ ರಾಘವೇಂದ್ರ ಕುಲಕರ್ಣಿ ಹೇಳುವ ಪ್ರಕಾರ ಮುಖ್ಯ ಕಾಲುವೆಯಿಂದ ಉಪಕಾಲುವೆಗೆ ನೀರು ಬಿಡುವ ಸ್ಥಳದಲ್ಲಿ ಒಂದು ಗೇಟ್ ನಿರ್ಮಿಸಿದರೆ ಸಾಕು ಅವಶ್ಯವಿರುವಷ್ಟು ನೀರನ್ನು ಮಾತ್ರ ಬಿಟ್ಟು ಕೊಳ್ಳಬಹುದು. ಆದರೆ ಗೇಟ್ ಇಲ್ಲದ ಕಾರಣ ಅನವಶ್ಯಕವಾಗಿ ಹೆಚ್ಚಿನ ನೀರು ಹರಿದು ನಷ್ಟ ಅನುಭವಿಸುವಂತಾಗಿದೆ ಎಂದು ಅವರು ಹೇಳುತ್ತಾರೆ. ಪ್ರಸ್ತುತ ಇಲಾಖೆ ಇತ್ತ ಕಡೆ ಗಮನ ಹರಿಸಿ ಸಮಸ್ಯೆ ಬಗೆ ಹರಿಸದಿದ್ದರೆ ಇಲಾಖೆಯ ಮುಂದೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ರೈತ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.