ADVERTISEMENT

ತಾಜ್‌: ಕೊಳಚೆ ಸುತ್ತವೇ ಜನರ ಮಹಲ್‌!

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 6:46 IST
Last Updated 28 ಜುಲೈ 2014, 6:46 IST

ಹಾವೇರಿ: ತಾಜ್‌...! ಎಂದಾಕ್ಷಣ ನೆನಪಾಗುವುದು ಆಗ್ರಾದ ಶುಭ್ರ ಬಿಳುಪಿನ ಸ್ವಚ್ಛತೆಯಿಂದ ಕಂಗೊಳಿಸುವ ಪ್ರೀತಿಯ ಮಹಲ್‌. ಆದರೆ ಇಲ್ಲಿಯ ತಾಜ್‌ನಗರ ತದ್ವಿರುದ್ದ. ಮೂಗಿ ಮುಚ್ಚಿ, ನಡೆದಾಡಲೂ ಸಾಧ್ಯವಿಲ್ಲದಷ್ಟು ತ್ಯಾಜ್ಯ– ಕೊಚ್ಚೆ, ರೋಗ ರುಜಿನದ ಭೀತಿ. ಈ ಮಧ್ಯೆಯೇ ಜನರು ತಮ್ಮ ‘ಮಹಲ್‌’ನಲ್ಲಿ ಬದುಕಬೇಕಾಗಿದೆ. 

ನಗರದಿಂದ ಕಾಗಿನೆಲೆಗೆ ಹೋಗುವ ರಸ್ತೆಯ ತಿರುವಿನ ಬಲಕ್ಕೆ ತಾಜ್‌ನಗರವಿದೆ. ಈ ಪ್ರದೇಶವು ನಗರ ಸಭೆಯ 31ನೇ ವಾರ್ಡ್‌ಗೆ ಒಳಪಟ್ಟಿದೆ.
ನಗರ ಕೇಂದ್ರೀಯ ಬಸ್‌ ನಿಲ್ದಾಣ, ಹೊಸಮನಿ ಸಿದ್ಧಪ್ಪ ವೃತ್ತ, ದಾನೇಶ್ವರಿ ನಗರ, ಆನೆಹೊಂಡದ ಕೊಳಚೆ ನೀರು ಈ ಬಡಾವಣೆಗೆ ಹರಿದು ಬರುತ್ತದೆ. ಮಳೆ ಬಂದರೆ ನಿವಾಸಿಗಳ ಪಾಡು ಹೇಳುವಂತಿಲ್ಲ. ಸುತ್ತಲ ಖಾಲಿ ಜಾಗದಲ್ಲಿ  ನೀರು ಆವರಿಸಿಕೊಳ್ಳುತ್ತದೆ. ರಸ್ತೆ ಮೇಲೆಯೇ ನೀರು ಹರಿದು ಹೋಗುತ್ತದೆ. ಕೆಲವೊಮ್ಮೆ ನೀರು ನಿಂತು ಮನೆಗಳೇ ದ್ವೀಪಗಳಾಗುತ್ತವೆ. ತಗ್ಗಿನಲ್ಲಿರುವ ಮನೆಗಳಿಗೆ ನೀರು ನುಗ್ಗಿ ಬರುತ್ತವೆ ಎನ್ನುತ್ತಾರೆ ಸ್ಥಳೀಯ ಜನರು.  

ಇಲ್ಲಿ ಚರಂಡಿ ನಿರ್ಮಿಸಿಲ್ಲ. ಬಡಾವಣೆ ಪ್ರವೇಶ ತನಕ ಚರಂಡಿ ಮಾಡಿ, ಕಾಮಗಾರಿ ನಿಲ್ಲಿಸಿದ್ದಾರೆ. ಆ ನೀರೆಲ್ಲ ಬಡಾವಣೆಗೆ ಬರುತ್ತದೆ. ಇನ್ನೊಂದೆಡೆ ಹೆಗ್ಗೇರಿ ಕೆರೆಯ ಕಡೆಗೆ ಹೋಗಬೇಕಾದ ನೀರ ಕಾಲುವೆ ಒಡೆದಿದೆ. ಇದರಿಂದ ಮಳೆ ಬಂದರೆ ಪ್ರವಾಹದಂತೆ ನೀರು ಬರುತ್ತದೆ. ಒಳಚರಂಡಿಯೂ ಇಲ್ಲದ ಕಾರಣ, ನೀರಿನಲ್ಲಿ ನಗರದ ತ್ಯಾಜ್ಯ, ಕೊಳಚೆ, ಮಲ ಸೇರಿದಂತೆ ಎಲ್ಲ ಹೊಲಸು ಬರುತ್ತದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಸೈಯ್ಯದ್‌.

ಹಾಗೆ ಬಂದ ನೀರು ತೆರೆದ ಚರಂಡಿ, ಖಾಲಿ ನಿವೇಶನದಲ್ಲಿ ನಿಂತು ಗಬ್ಬೆದ್ದು ನಾರುತ್ತದೆ. ಅವುಗಳಲ್ಲಿ ಹಂದಿಗಳು ಹೊರಳಾಡುತ್ತವೆ. ಕೆಲವು ಅಲ್ಲೇ ಸತ್ತು ಬಿದ್ದಿರುತ್ತವೆ. ಸೊಳ್ಳೆ ಉತ್ಪತ್ತಿಯಾಗಿ ರೋಗ ರುಜಿನಗಳು ತಪ್ಪುತ್ತಿಲ್ಲ ಎಂಬುದು ಮಹಿಳೆಯರ ದೂರು. ಹದಿನೈದು–ಇಪ್ಪತ್ತು ದಿನಕ್ಕೊಮ್ಮೆ ನೀರು ಸರಬರಾಜು ಮಾಡುತ್ತಾರೆ. ಕೆಲವೇ ಕೊಳವೆ ಬಾವಿಗಳನ್ನು   ಎಲ್ಲರೂ ಅವಲಂಬಿಸಬೇಕಾಗಿದೆ. ಶುದ್ಧ ನೀರು ಸಿಗುವುದೇ ಇಲ್ಲ. ಬೇಸಿಗೆಯಲ್ಲಿ ಭಾರಿ ಕಷ್ಟ ಎಂದು ನಿವಾಸಿ ಖಮರುಲ್‌ ನೋವು ತೋಡಿಕೊಳ್ಳುತ್ತಾರೆ.

ಸುತ್ತಮುತ್ತ ನಿವೇಶನಗಳು ಮಾರಾಟವಾಗಿವೆ. ಆದರೆ ಖಾಲಿ ಇದೆ. ಚರಂಡಿ, ಕುಡಿಯುವ ನೀರಿನ ಪೈಪ್‌ಲೈನ್‌್ ಮತ್ತಿತರ ಕಾಮಗಾರಿಗೆ ಒತ್ತಾಯಿಸಿದರೆ, ‘ನಿಮ್ಮ ನಿವೇಶನ ಎನ್‌ಎ (ಕೃಷಿಯೇತರ) ಆಗಿಲ್ಲ. ಆದ್ದರಿಂದ ಸೌಲಭ್ಯಗಳು ದೊರೆಯುವುದಿಲ್ಲ’ ಎಂಬ ಉತ್ತರ ನಗರಸಭೆಯಿಂದ ಬರುತ್ತದೆ ಎನ್ನುತ್ತಾರೆ ನಿವಾಸಿಗಳು. 

ಕೋಡಿಹಳ್ಳಿ ಸಂಪರ್ಕಿ ಸುವ ಕಚ್ಛಾ ರಸ್ತೆಯಿದ್ದು, ಡಾಂಬರು ಕಂಡಿಲ್ಲ. ಅದು ಮಳೆ ಬಂದರೆ ಸಂಪೂರ್ಣ ಕೊಚ್ಚೆಯಾಗಿ ಮಾರ್ಪಡುತ್ತದೆ. ವಾಹನ ಸಂಚಾರ ಅಸಾಧ್ಯ. ನಡೆದಾಡಲೂ ಸಾಧ್ಯವಿಲ್ಲದ ಎನ್ನುವ ಸ್ಥಿತಿ ನಿರ್ಮಾಣವಾಗುತ್ತದೆ.  ಪಿ.ಬಿ ರಸ್ತೆ, ಕೇಂದ್ರೀಯ ಬಸ್‌ ನಿಲ್ದಾಣ ಹಾಗೂ ಹೊಸಮನಿ ಸಿದ್ದಪ್ಪ ವೃತ್ತದ ಕೂಗಳತೆಯಲ್ಲಿರುವ ಬಡಾವಣೆ ಜನರ ಸಮಸ್ಯೆ ಅರಣ್ಯರೋಧನವಾಗಿದೆ. ಅಗತ್ಯ ಕಾಮಗಾರಿ ನಡೆಸುವ ಮೂಲಕ ಅಭಿವೃದ್ಧಿ ಮಾಡಬೇಕು. ಚರಂಡಿ, ಕುಡಿಯುವ ನೀರು ಹಾಗೂ ರಸ್ತೆ ಅಭಿವೃದ್ಧಿ ಪಡಿಸಬೇಕು. ಎನ್‌ಎ  ಮಾಡಲು ಅನುಮತಿ ನೀಡಬೇಕು ಎಂಬುದು ಜನತೆ ಬೇಡಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.