ಮುಂಡಗೋಡ: ತಾಲ್ಲೂಕಿನ ಮಳಗಿ ಸಮೀಪದ ಧರ್ಮಾ ಜಲಾಶಯದಿಂದ ಪಕ್ಕದ ಹಾನಗಲ್ ತಾಲ್ಲೂಕಿಗೆ ಕಾಲುವೆ ಮೂಲಕ ಶುಕ್ರವಾರದಿಂದ ನೀರು ಹರಿಸಲಾಗುತ್ತಿದೆ.
ಸುಮಾರು 14 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಹಾಗೂ ತಾಲ್ಲೂಕಿನ ನಾಲ್ಕು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಧರ್ಮಾ ಜಲಾಶಯ ಗರಿಷ್ಠ ಮಟ್ಟ ತಲುಪಿದೆ.
ಹೀಗಾಗಿ ಹಾನಗಲ್ ತಾಲ್ಲೂಕಿನ ಕೆರೆಕಟ್ಟೆಗಳನ್ನು ತುಂಬಿಸಲು ನೀರು ಬಿಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಇದೇ ಮೊದಲು ತುಂಬಿರುವ ಧರ್ಮಾ ಜಲಾಶಯದಿಂದ, ಹಾನಗಲ್ ನೀರಾವರಿ ಇಲಾಖೆಯ ಸಿಬ್ಬಂದಿ ಕಾಲುವೆ ಮೂಲಕ ನೀರು ಹರಿಸಿದರು.
‘ಹಾನಗಲ್ ತಾಲ್ಲೂಕಿನಲ್ಲಿರುವ ಸುಮಾರು 98 ಕೆರೆಗಳಿಗೆ ಧರ್ಮಾ ಜಲಾಶಯದ ಮೂಲಕ ನೀರು ತುಂಬಿಸಲು ಬೆಳಿಗ್ಗೆಯಿಂದ ಬಿಡಲಾಗುತ್ತಿದೆ. ಸದ್ಯಕ್ಕೆ ಎಂಟತ್ತು ದಿನ ನೀರು ಬಿಡುವ ಬಗ್ಗೆ ನಿರ್ಧರಿಸಲಾಗಿದ್ದು, ಮುಂದೆ ಮಳೆ ಸ್ಥಿತಿಗತಿಯನ್ನು ನೋಡಿ, ನೀರನ್ನು ಎಷ್ಟು ಪ್ರಮಾಣದಲ್ಲಿ ಬಿಡಬೇಕೆಂಬುದನ್ನು ಅಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗುತ್ತದೆ’ ಎಂದು ಹಾನಗಲ್ ನೀರಾವರಿ ಇಲಾಖೆಯ ಎಸ್ಒ ದೇವರಾಜು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.