ADVERTISEMENT

ಧರ್ಮ, ಜಾತಿ ಬಗ್ಗೆ ತಪ್ಪು ಕಲ್ಪನೆ: ಸ್ವಾಮೀಜಿ ವಿಷಾದ

​ಪ್ರಜಾವಾಣಿ ವಾರ್ತೆ
Published 5 ಮೇ 2019, 15:09 IST
Last Updated 5 ಮೇ 2019, 15:09 IST
ಹಾವೇರಿಯ ಹರಸೂರು ಬಣ್ಣದಮಠದಲ್ಲಿ ನಡೆದ ಧರ್ಮ ಸಭೆಯ ಸಾನಿಧ್ಯವಹಿಸಿ ಡಾ.ಪ್ರಸನ್ನರೇಣುಕ ವೀರಸೋಮೇಶ್ವರ ಸ್ವಾಮೀಜಿ ಮಾತನಾಡಿದರು
ಹಾವೇರಿಯ ಹರಸೂರು ಬಣ್ಣದಮಠದಲ್ಲಿ ನಡೆದ ಧರ್ಮ ಸಭೆಯ ಸಾನಿಧ್ಯವಹಿಸಿ ಡಾ.ಪ್ರಸನ್ನರೇಣುಕ ವೀರಸೋಮೇಶ್ವರ ಸ್ವಾಮೀಜಿ ಮಾತನಾಡಿದರು   

ಹಾವೇರಿ: ಧರ್ಮಕ್ಕೂ ಜಾತಿಗೂ ಭೂಮಿ ಆಕಾಶದಷ್ಟು ಅಂತರವಿದೆ. ಆದರೆ, ಬಹಳಷ್ಟು ಜನರು ಧರ್ಮ ಒಂದು ಜಾತಿ ಎಂದು ತಪ್ಪಾಗಿ ತಿಳಿದಿದ್ದಾರೆ ಎಂದು ಬಾಳೆಹೊನ್ನೂರು ರಂಭಾಪುರಿ ಮಠದ ಪ್ರಸನ್ನರೇಣುಕ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ನಗರದ ಹರಸೂರು ಬಣ್ಣದಮಠದ ಈಚೆಗೆ ನಡೆದ ಲಿಂಗೈಕ್ಯ ಮಲ್ಲಿಕಾರ್ಜುನ ಸ್ವಾಮೀಜಿಯ 34ನೇ ಪುಣ್ಯ ಸ್ಮರಣೆಹಾಗೂ ವರ್ಧಂತಿಮಹೋತ್ಸವದ ಧರ್ಮಸಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಧರ್ಮದಲ್ಲಿರುವ ದೂರದೃಷ್ಟಿ, ಸಮಗ್ರತೆ ಜಾತಿಯಲ್ಲಿ ಬರುವುದಿಲ್ಲ ಎನ್ನುವ ಸತ್ಯವನ್ನು ಪ್ರತಿಯೊಬ್ಬರು ಅರಿಯಬೇಕು. ಪ್ರಸ್ತುತ ಧರ್ಮ, ಜಾತಿ, ಪ್ರಾಂತ್ಯದ ಹೆಸರಲ್ಲಿ ಅನೇಕ ದುರ್ಘಟನೆ ನಡೆಯುತ್ತಿರುವುದು ವಿಷಾದನೀಯಎಂದರು.

ADVERTISEMENT

ಸನಾತನ ಕಾಲದಿಂದಲೂ ವೀರಶೈವ ಧರ್ಮ ಸಮಾಜದಲ್ಲಿ ಉಚ್ಚ ಮತ್ತು ನೀಚ ಎಂದು ಎಣಿಸದೇ ಸಮಾನವಾಗಿ ಕಾಣುತ್ತ ಬಂದಿದೆ. ಬಸವಾದಿ ಶಿವಶರಣರ ಹೆಸರನಲ್ಲಿ ಸಮಾಜವನ್ನು ವರ್ಗೀಕರಣಮಾಡುವ ಮೂಲಕ ಜನರ ಮನಸ್ಸನ್ನು ಕಲುಷಿತಗೊಳಿಸುವುದಕ್ಕೆ ಕೆಲವರು ಮುಂದಾಗುತ್ತಿದ್ದು, ಇದಕ್ಕೆ ಹೆಚ್ಚಿನ ಆದ್ಯತೆಯನ್ನು ದೊರೆಯುತ್ತಿಲ್ಲ ಎಂದರು.

ಸ್ವಾಭಿಮಾನವಿಲ್ಲದ ಕಾರಣಕ್ಕೆ ನಾವೆಲ್ಲರು ಬಹಳಷ್ಟು ಕೆಳಮಟ್ಟಕ್ಕೆ ಸಾಗುತ್ತಿದ್ದೇವೆ. ಜನ್ಮ ಕೊಟ್ಟತಾಯಿ, ಜನ್ಮಭೂಮಿ ಸ್ವರ್ಗಕ್ಕೆ ಮಿಗಿಲಾಗಿದೆ. ಮನುಷ್ಯನಲ್ಲಿ ಮಾನವೀಯ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.

ಶಾಸಕ ನೆಹರು ಓಲೇಕಾರ, ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ರಟ್ಟೀಹಳ್ಳಿ ಕಬ್ಬಿಣಕಂತಿಮಠ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಶಶಿಧರ ಹೊಸಳ್ಳಿ, ಬಿಳಕಿ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಾದಿಹಳ್ಳಿಯ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಅಕ್ಕಿಆಲೂರಿನ ಕಬ್ಬಿಣಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಿಳಗಿಯ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಜಗದೀಶ ಕನವಳ್ಳಿ, ಶಿವಯೋಗಿ ಹುಲಿಕಂತಿಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.