ADVERTISEMENT

ನೀರಿನ ಕರ ಹೆಚ್ಚಳಕ್ಕೆ ನಾಗರಿಕರ ವಿರೋಧ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 8:40 IST
Last Updated 13 ಅಕ್ಟೋಬರ್ 2011, 8:40 IST

ಹಾನಗಲ್: ಹಾನಗಲ್ ಪುರಸಭೆ ವ್ಯಾಪ್ತಿಯಲ್ಲಿನ ನಳದ ನೀರಿನ ಕರವನ್ನು 45 ರೂಪಾಯಿಯಿಂದ 80 ರೂಪಾಯಿಗೆ ಏರಿಕೆ ಮಾಡಲಾಗಿದ್ದು, ಇದನ್ನು ಕಡಿಮೆಗೊಳಿಸಬೇಕೆಂದು ಒತ್ತಾಯಿಸಿ ಮತ್ತು ಬಡತನ ರೇಖೆಯ ಕುಟುಂಬಗಳಿಗೆ ಉಚಿತ ನೀರು ಸರಬರಾಜು ಮಾಡುವ ಆದೇಶವಿದ್ದು ಇದನ್ನು ಕೂಡಲೇ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಇಲ್ಲಿನ ನಾಗರಿಕರು ಪುರಸಭೆಗೆ ಮನವಿ ಅರ್ಪಿಸಿದ್ದಾರೆ.

2011 ಆಗಟ್ 24ರಂದು ಸರಕಾರವು ಹೊರಡಿಸಿದ ಆದೇಶದಂತೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತ ನೀರು ಸರಬರಾಜು ಮಾಡಬೇಕು. ಮೊದಲಿದ್ದ ನೀರಿನ ಕರ ದರವಾದ 45 ರೂಪಾಯಿಗಳನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದ್ದಾರೆ.

ನೀರಿನ ಕರ  ದರವನ್ನು ಏರಿಸುವ ಮುನ್ನ ನಾಗರಿಕರ ಸಭೆಯನ್ನು ಕರೆದು ಸಾಧಕ ಬಾಧಕ ಬಗ್ಗೆ ಪರಿಶೀಲಿಸಬೇಕಾಗಿತ್ತು. ಪೆಟ್ರೋಲ್ ಸೇರಿದಂತೆ ಅಗತ್ಯ ಸಾಮಗ್ರಿಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ
ಸಾರ್ವಜನಿಕರಿಗೆ ನೀರಿನ ಕರ ಹೆಚ್ಚಳ ಇನ್ನಷ್ಟು ಆರ್ಥಿಕ ಹೊರೆಯಂತಾಗಿದೆ. ನೀರಿನ ಬಳಕೆದಾರರಿಗೆ ಪುರಸಭೆಯವರು ಹೆಚ್ಚೆಂದರೆ ವಾರದಲ್ಲಿ ಎರಡು ಬಾರಿ ನೀರನ್ನು ಸರಬರಾಜು ಮಾಡುತ್ತಾರೆ. ಇದಲ್ಲದೆ ಪಟ್ಟಣದಲ್ಲಿರುವ ಜೋಡಣಾ ನಳಗಳಿಗೆ ನೀರು ಸರಿಯಾಗಿ ಪೂರೈಕೆಯಾಗುವುದಿಲ್ಲ ಎಂದು ದೂರಿದ್ದಾರೆ.

ಆದ್ದರಿಂದ ಪುರಸಭೆಯವರು ಬಳಕೆದಾರರ ಸಭೆಯನ್ನು ಕರೆದು ಎಲ್ಲರ ಅಹವಾಲುಗಳನ್ನು  ಕೇಳಿ ನಂತರ ನೀರಿನ ಕರವನ್ನು ಹೆಚ್ಚಿಸುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗಿತ್ತು ಎಂದು ಇಲ್ಲಿನ ನಾಗರಿಕರಾದ ಎಂ.ಕೆ. ಪಾರಗಾಂವಕರ, ಎಂ.ಎಂ. ಮಾಸನಕಟ್ಟಿ, ಎಚ್.ಎಂ. ಅತ್ತಾರ, ಸಿದ್ಧರಾಮಣ್ಣ ಚಿಕ್ಕಣ್ಣನವರ, ಗುರು ನಿಂಗೋಜಿ, ಮೋಹನ ಕೆರೂರ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.