ರಾಣೆಬೆನ್ನೂರು: ಯಾಂತ್ರಿಕ ಜೀವನ ಶೈಲಿಯ ದಿನಮಾನಗಳಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಅಭಿವೃದ್ಧಿಗೆ ಪ್ರಾಣಾಯಾಮ, ಯೋಗ ತರಬೇತಿ ಅನಿವಾರ್ಯವಾಗಿದೆ ಎಂದು ಜಿಪಂ ಅಧ್ಯಕ್ಷ ಮಂಜುನಾಥ ಎಚ್. ಒಲೇಕಾರ ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಬೆಂಗಳೂರಿನ ದ ಆರ್ಟ್ ಆಫ್ ಲಿವಿಂಗ್ನ ‘ವೇ’ ಘಟಕದ ಆಶ್ರಯದಲ್ಲಿ ಜಾರಿಗೆ ತಂದಿರುವ ‘ಮಾನವತೆ’ ಯೋಜನೆ ಅಡಿಯಲ್ಲಿ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗಾಗಿ ನಾಲ್ಕು ದಿವಸಗಳ ‘ಸುದರ್ಶನ ಕ್ರಿಯೆ ಹಾಗೂ ಪ್ರಾಣಾಯಾಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿರುವ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ತಮ್ಮ ಜೀವನ ಶೈಲಿಯನ್ನು ಉನ್ನತಿಕರಣಗೊಳಿಸಿಕೊಳ್ಳಲು ಇಲಾಖೆ ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ ಎಂದು ಓಲೇಕಾರ ತಿಳಿಸಿದರು. ನಗರಸಭೆ ಪೌರಾಯುಕ್ತ ಎಂ. ಎಂ.ಕರಭೀಮಣ್ಣವರ ಮಾತನಾಡಿ ಸ್ವಾಮಿ ವಿವೇಕಾನಂದರ ‘ಸದೃಡವಾದ ದೇಹದಲ್ಲಿ ಸದೃಢವಾದ ಮನಸ್ಸು’ ಎಂಬ ನುಡಿಯು ಎಂದೆಂದಿಗೂ ಪ್ರಸ್ತುತವಾಗಿದೆ. ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಸುದರ್ಶನ ಕ್ರಿಯೆ ಮತ್ತು ಪ್ರಾಣಾಯಾಮ ಯೋಗ ತರಬೇತಿ ಅತಿ ಮುಖ್ಯವಾಗಿದೆ ಎಂದರು.ಯೋಜನೆಯ ಸಮನ್ವಯಾಧಿಕಾರಿ ಪ್ರೊ.ಅರುಣ ಕುಮಾರ ಚಂದನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರೋ.ಬಿ.ಆರ್.ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆರ್.ಎಫ್.ಅಯ್ಯನಗೌಡ್ರ, ಎಲ್.ವಿ.ಸಂಗಳದ, ಚಂದ್ರಶೇಖರ, ಎಸ್.ಎಂ. ಸೀತಾಳದ, ಎಸ್.ಬಿ.ಪಾಟೀಲ, ಜ್ಯೋತಿ ಲಕ್ಷ್ಮಿ, ರೇಖಾ, ಗೀತಾ ಕೋಟೆಣ್ಣವರ, ಬಿ.ರವಿ, ಬನಶಂಕರಿ, ನದಾಫ್ ಮತ್ತಿತರರು ಉಪಸ್ಥಿತರಿದ್ದರು.ರೇಖಾ ಮತ್ತು ಗೌರಮ್ಮ ಪ್ರಾರ್ಥಿಸಿದರು. ಜ್ಯೋತಿ ಎಸ್ ಸ್ವಾಗತಿಸಿದರು. ಸ್ನೇಹಾ ಸಮಾರಂಭದ ಅತಿಥಿಗಳ ಪರಿಚಯ ಮಾಡಿದರು. ಮುರಳಿಧರ ಎಸ್.ವಿ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.