ADVERTISEMENT

ಬೆಳಗಾವಿ: ₹18 ಕೋಟಿ ಮೌಲ್ಯದ ಮದ್ಯ ಮಾರಾಟ

ಬೆಳಗಾವಿ ವಿಭಾಗದಲ್ಲಿ ಒಂದೇ ದಿನ 3.79 ಲಕ್ಷ ಲೀಟರ್ ಮದ್ಯ ಬಿಕರಿ

​ಪ್ರಜಾವಾಣಿ ವಾರ್ತೆ
Published 5 ಮೇ 2020, 15:11 IST
Last Updated 5 ಮೇ 2020, 15:11 IST
ಹಾವೇರಿಯ ಸಿದ್ದಪ್ಪ ವೃತ್ತದ ಸಮೀಪ ಮಂಗಳವಾರ ಮದ್ಯ ಖರೀದಿಸಲು ಸರದಿಯಲ್ಲಿ ನಿಂತಿದ್ದ ಗ್ರಾಹಕರು 
ಹಾವೇರಿಯ ಸಿದ್ದಪ್ಪ ವೃತ್ತದ ಸಮೀಪ ಮಂಗಳವಾರ ಮದ್ಯ ಖರೀದಿಸಲು ಸರದಿಯಲ್ಲಿ ನಿಂತಿದ್ದ ಗ್ರಾಹಕರು    

ಹಾವೇರಿ: ‘ಬೆಳಗಾವಿ ವಿಭಾಗದಲ್ಲಿ ಮೇ 4ರಂದು ಒಟ್ಟಾರೆ 3,79,757 ಲೀಟರ್ ಮದ್ಯ ಹಾಗೂ 99,857 ಲೀಟರ್ ಬಿಯರ್ ಮಾರಾಟವಾಗಿರುತ್ತದೆ. ಇದರ ಒಟ್ಟಾರೆ ಅಂದಾಜು ಮೌಲ್ಯ ₹17.94 ಕೋಟಿ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬೆಳಗಾವಿ ವಿಭಾಗದಲ್ಲಿ ಕೆ.ಎಸ್.ಬಿ.ಸಿ.ಎಲ್, ಡಿಪೋಗಳಲ್ಲಿ ವಿವಿಧ ಬ್ರಾಂಡ್‌ಗಳ ಮದ್ಯದ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ’ ಎಂದು ಅಬಕಾರಿ ಜಂಟಿ ಆಯುಕ್ತ ಡಾ.ವೈ.ಮಂಜುನಾಥ ತಿಳಿಸಿದ್ದಾರೆ.

ಅಗತ್ಯವಿರುವಷ್ಟು ಮದ್ಯವನ್ನು ಸಿ.ಎಲ್-2 ಮತ್ತು ಎಂ.ಎಸ್.ಐ.ಎಲ್ ಸಂಸ್ಥೆಯ ಸಿಎಲ್ 11(ಸಿ) ಮದ್ಯದಂಗಡಿಗಳಿಂದ ಮಾರಾಟ ಮಾಡಲಾಗುವುದು. ಗ್ರಾಹಕರು ಮದ್ಯವನ್ನು ಖರೀದಿಸುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಮಾಸ್ಕ್ ಧರಿಸದೇ ಇದ್ದಲ್ಲಿ ಅಂತಹ ಗ್ರಾಹಕರಿಗೆ ಮದ್ಯವನ್ನು ನೀಡಲಾಗುವುದಿಲ್ಲ. ಇದರ ಜೊತೆಗೆ ಗ್ರಾಹಕರು ಕಡ್ಡಾಯವಾಗಿ ಅಂತರವನ್ನು ಕೂಡ ಪಾಲಿಸಬೇಕಾಗುತ್ತದೆ ಮತ್ತು ಮದ್ಯದಂಗಡಿಗಳ ಹತ್ತಿರ ಇಡಲಾದ ಹ್ಯಾಂಡ್ ಸ್ಯಾನಿಟೈಸರ್‌ ಉಪಯೋಗಿಸಲು ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಮೇ 4ರಂದು ಮೊದಲ ದಿನ ಮದ್ಯ ಖರೀದಿಸಲು ಇದ್ದಂತಹ ಒತ್ತಡ ಮತ್ತು ಬೇಡಿಕೆ ಎರಡನೇ ದಿನವಿರಲಿಲ್ಲ. ಗ್ರಾಹಕರು ಮದ್ಯ ದೊರೆಯುವುದಿಲ್ಲವೆಂಬ ಆತಂಕಕ್ಕೆ ಒಳಗಾಗಬಾರದು. ಪ್ರತಿದಿನ ಮದ್ಯ ಮಾರಾಟದ ಸಮಯ ಬೆಳಗ್ಗೆ 9 ರಿಂದ ಸಂಜೆ 7 ಗಂಟೆಯವರೆಗೆ ಇರುತ್ತದೆ ಎಂದು ತಿಳಿಸಿದ್ದಾರೆ.

ADVERTISEMENT

185 ಆರೋಪಿಗಳ ಬಂಧನ

ಕೋವಿಡ್-19 ನಿಮಿತ್ತ ಜಾರಿಯಾದ ಲಾಕ್‍ಡೌನ್ ಅವಧಿಯಲ್ಲಿ ಮಾರ್ಚ್‌ 24ರಿಂದ ಮೇ 3ರವರೆಗೆ ಬೆಳಗಾವಿ ವಿಭಾಗದ ವ್ಯಾಪ್ತಿಯ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ 3,340 ಅಬಕಾರಿ ದಾಳಿಗಳನ್ನು ನಡೆಸಿ 404 ಪ್ರಕರಣಗಳನ್ನು ದಾಖಲಿಸಿ 185 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.

17,887 ಲೀಟರ್ ಮದ್ಯ, 106 ಲೀಟರ್ ಹೊರರಾಜ್ಯದ ಮದ್ಯ 14,118 ಬಾಟಲ್ ಬಿಯರ್, 68 ಲೀಟರ್ ಸೇಂದಿ, 80 ಲೀಟರ್ ಸಂತ್ರಾ, 98 ಲೀಟರ್ ಕಾಜು ಫೆನಿ, 2.5 ಲೀಟರ್ ನೀರು ಮಿಶ್ರಿತ ಮದ್ಯಸಾರಾಯಿ, 3,613 ಕಳ್ಳಬಟ್ಟಿ ಸಾರಾಯಿ, 4,825 ಬೆಲ್ಲದ ಕೊಳೆ, 26.84 ಲೀಟರ್ ವೈನ್ ಹಾಗೂ 268 ದ್ವಿಚಕ್ರ ವಾಹನಗಳು ಹಾಗೂ 16 ನಾಲ್ಕು ಚಕ್ರಗಳ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಪ್ತಿ ಮಾಡಲಾಗಿರುವ ಎಲ್ಲ ಅಬಕಾರಿ ವಸ್ತುಗಳ ಮೌಲ್ಯ ₹1.46 ಕೋಟಿ ಹಾಗೂ ವಶಪಡಿಸಿಕೊಂಡ ವಾಹನಗಳ ಅಂದಾಜು ಮೌಲ್ಯ ₹1.90 ಕೋಟಿ, ಒಟ್ಟು ಮೌಲ್ಯ ₹2.55 ಕೋಟಿ ಎಂದು ಅಬಕಾರಿ ಜಂಟಿ ಆಯುಕ್ತರಾದ ಡಾ.ವೈ.ಮಂಜುನಾಥ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಅಬಕಾರಿ ಉಪ ಆಯುಕ್ತರಾದ ಬಸವರಾಜ ನೇತೃತ್ವದಲ್ಲಿ ಎಲ್ಲ ಅಬಕಾರಿ ಸಿಬ್ಬಂದಿ ಅತ್ಯುತ್ತಮವಾಗಿ ತನಿಖಾ ಚಟುವಟಿಕೆಗಳನ್ನು ನಿರ್ವಹಿಸಿ ಸಾಕಷ್ಟು ಪ್ರಮಾಣದ ಅಕ್ರಮ ಚಟುವಟಿಕೆಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.