ADVERTISEMENT

ಮನೆಗಳ ಹಂಚಿಕೆ: ಸಿಐಡಿ ತನಿಖೆ ನಿರ್ಧಾರ

ಹಾವೇರಿ ತಾಲ್ಲೂಕು ಪಂಚಾಯಿತಿ ಸಭೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 6:16 IST
Last Updated 17 ಡಿಸೆಂಬರ್ 2013, 6:16 IST

ಹಾವೇರಿ: ಬಸವ ವಸತಿ ಯೋಜನೆಯಡಿ 2010–೨೦11ನೇ ಸಾಲಿನಲ್ಲಿ ಹಂಚಿಕೆಯಾದ ಮನೆಗಳ ತನಿಖೆಯನ್ನು ಸಿಐಡಿಗೆ ಒಪ್ಪಿಸಲು ಸೋಮವಾರ ನಡೆದ ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ  ನಿರ್ಧಾರಿಸಲಾಯಿತು. ಅಲ್ಲದೇ, ಗ್ರಾಮ ಸಭೆ ನಡೆಸಿದ ಬಗ್ಗೆ  ವಿಡಿಯೊ ಚಿತ್ರೀಕರಣ ನೋಡಲು ಸಭೆಯನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

ಬಸವ ವಸತಿ ಯೋಜನೆಗೆ ಗ್ರಾಮಸಭೆಗಳನ್ನು ನಡೆಸದೇ, ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂಬ  ಸದಸ್ಯರ ಆರೋಪಕ್ಕೆ ಪ್ರತಿಕಿ್ರಯೆಯಾಗಿ ಅಧ್ಯಕ್ಷತೆ ವಹಿಸಿದ್ದ ಶಾಸಕ ರುದ್ರಪ್ಪ ಲಮಾಣಿ ಈ ನಿರ್ಧಾರ ಕೈಗೊಂಡರು.

ಸದಸ್ಯರಾದ ಪರಮೇಶ್ವರಪ್ಪ ಕುರವತ್ತಿಗೌಡ್ರ, ಚನ್ನಬಸಪ್ಪ ಅರಳಿ, ಬಸವರಾಜ ಕಳಸೂರು ಮಾತನಾಡಿ, ಈ ಹಿಂದೆ ನ.೧೪ರಂದು ನಡೆದ ಸಭೆಯಲ್ಲಿ ಕೂಡ ಗ್ರಾಮಸಭೆ ನಡೆಸಿದ ವಿಡಿಯೊ ಚಿತ್ರೀಕರಣ ತೋರಿಸದಿರುವುದನ್ನು ಗಮನಿಸಿದರೆ, ಬಸವ ವಸತಿ ಯೋಜನೆಗೆ ನಿಜವಾದ ಫಲಾನು ಭವಿಗಳ ಆಯ್ಕೆಯಾಗಿಲ್ಲ ಎಂದು ಆರೋಪಿಸಿದರು.

ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ಪ್ರತಿಯೊಂದು ಗ್ರಾಮ ಪಂಚಾಯ್ತಿಗೆ ೨೦ ಮನೆ ಹಂಚಿಕೆಯಾಗಿದ್ದು ಗಮನಿಸಿದರೆ, ಬಿಜೆಪಿ ಸರ್ಕಾರ ಕಾನೂನು ಬಾಹಿರವಾಗಿ ಮನೆ ಹಂಚಿಕೆ ಮಾಡಿದ್ದು ಸ್ಪಷ್ಟವಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಬಸವ ವಸತಿ ಯೋಜನೆಯಲ್ಲಿ ಹಂಚಿಕೆಯಾದ ಮನೆಗಳ ತನಿಖೆಯನ್ನು ಸಿಐಡಿಗೆ ಒಪ್ಪಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿದರು.

ಶಾಸಕರ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ  ಸದಸ್ಯರು, ಕೇವಲ ಬಸವ ವಸತಿ ಯೋಜನೆ ಅಷ್ಟೇ ಸಿಒಡಿಗೆ ಒಪ್ಪಿಸದೇ, ಇಂದಿರಾ ಆವಾಸ್ ಯೋಜನೆಯಡಿ ಹಂಚಿಕೆಯಾದ ಮನೆಗಳ ಬಗ್ಗೆಯೂ ತನಿಖೆ ನಡೆಸುವಂತೆ ಸವಾಲು ಹಾಕಿದರು. ಸಭೆಯಲ್ಲಿ  ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ  ಸದಸ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.